ಬೈಕ್ ತಡೆದು ನಿಲ್ಲಿಸಿ ಯುವಕನ ಮೇಲೆ ಹಲ್ಲೆ: ಐದು ಮಂದಿ ವಿರುದ್ಧ ನರಹತ್ಯಾಯತ್ನ ಪ್ರಕರಣ ದಾಖಲು

ಕಾಸರಗೋಡು: ಬೈಕ್‌ನಲ್ಲಿ ಸಂಚರಿಸುತ್ತಿದ್ದ ಯುವಕನನ್ನು ತಡೆದು ನಿಲ್ಲಿಸಿ ಬೆತ್ತ ಹಾಗೂ ಹೆಲ್ಮೆಟ್‌ನಿಂದ ಹಲ್ಲೆ ನಡೆಸಿರುವುದಾಗಿ ನೀಡಲಾದ ದೂರಿನಂತೆ ಐದು ಮಂದಿ ವಿರುದ್ಧ ಕಾಸರಗೋಡು ಪೊಲೀಸರು ನರಹತ್ಯಾ ಯತ್ನ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಅಣಂಗೂರು ಜೆ.ಪಿ ನಗರದ ವಿಜೇಶ್ ಆರ್ (31) ಎಂಬಾತನ ಮೇಲೆ ಹಲ್ಲೆ ನಡೆಸಿರುವುದಾಗಿ  ಆರೋಪಿಸಲಾಗಿದೆ. ಈ ಬಗ್ಗೆ ಅವರು ನೀಡಿದ ದೂರಿನಂತೆ  ಮಿಥುನ್, ನವೀನ್, ದಿನೇಶ್ ಮತ್ತು ಕಂಡರೆ ಗುರುತು ಪತ್ತೆಹಚ್ಚಬಹುದಾದ ಇತರ ಇಬ್ಬರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಬೈಕ್‌ನಲ್ಲಿ  ನಿನ್ನೆ ಸಂಜೆ ಸಂಚರಿಸುತ್ತಿದ್ದ ವೇಳೆ ಜೆ.ಪಿ.ನಗರ ಕಾಲನಿಯ ರಸ್ತೆಯಲ್ಲಿ ಆರೋಪಿಗಳು ತಮ್ಮ ಬೈಕ್‌ನ್ನು ತಡೆದು ನಿಲ್ಲಿಸಿ ಹಲ್ಲೆ ನಡೆಸಿರುವುದಾಗಿ ಪೊಲೀಸರಿಗೆ  ನೀಡಿದ ದೂರಿನಲ್ಲಿ ವಿಜೇಶ್  ಆರೋಪಿಸಿದ್ದಾರೆ. ಗಾಯಗೊಂಡ ಅವರನ್ನು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.

You cannot copy contents of this page