ಮಂಗಳೂರು ವಿಮಾನ ದುರಂತಕ್ಕೆ ಇಂದು 14 ವರ್ಷ: ಮೃತಪಟ್ಟವರ ಕುಟುಂಬಕ್ಕೆ ನಷ್ಟಪರಿಹಾರ ಇನ್ನೂ ಬಾಕಿ
ಕಾಸರಗೋಡು: ಮಂಗಳೂರು ವಿಮಾನ ದುರಂತಕ್ಕೆ ಇಂದು 14 ವರ್ಷ. 2010 ಮೇ 22 ರಂದು ಬೆಳಿಗ್ಗೆ 6.30ಕ್ಕೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಇಳಿಯಲಿರುವ ಸಂದರ್ಭ ಏರ್ ಇಂಡಿಯಾ ವಿಮಾನ ಅಪಘಾತಕ್ಕೆ ತುತ್ತಾಗಿ ಪಥನಗೊಂಡಿದೆ. ದುಬಾಯಿಯಿಂದ ತಲುಪಿದ ಈ ವಿಮಾನ ಲ್ಯಾಂಡ್ ಆಗುತ್ತಿರುವ ಮಧ್ಯೆ ರನ್ವೇಯಿಂದ ತಪ್ಪಿ ದೊಡ್ಡ ಹೊಂಡಕ್ಕೆ ಬಿದ್ದು ಬೆಂಕಿ ಸೃಷ್ಟಿಯಾಗಿ ದುರಂತ ಸಂಭವಿಸಿತ್ತು. ಕಾಸರಗೋಡು, ಕಣ್ಣೂರು, ಮಂಗಳೂರು ನಿವಾಸಿಗಳಾದ 180 ಪ್ರಯಾಣಿಕರು ಹಾಗೂ ಆರು ಮಂದಿ ನೌಕರರು ವಿಮಾನದಲ್ಲಿದ್ದರು. ಇವರಲ್ಲಿ 158 ಮಂದಿ ಮೃತಪಟ್ಟಿದ್ದು, ಕೇರಳೀಯರ ಸಹಿತ 8 ಪ್ರಯಾಣಿಕರು ಆಶ್ಚರ್ಯಕರ ರೀತಿಯಲ್ಲಿ ಪಾರಾಗಿದ್ದಾರೆ. ಮೃತಪಟ್ಟವರಲ್ಲಿ 52 ಮಂದಿ ಕೇರಳೀಯರಿದ್ದರು. ಮೃತದೇಹದ ಗುರುತು ಕೂಡಾ ಪತ್ತೆಹಚ್ಚಲು ಸಾಧ್ಯ ವಾಗದ ರೀತಿಯಲ್ಲಿ ಸುಟ್ಟು ಕರಕಲಾಗಿತ್ತು. ಈ ಹಿನ್ನೆಲೆಯಲ್ಲಿ ಮೃತದೇಹಗಳನ್ನೆಲ್ಲಾ ಒಟ್ಟಾಗಿ ಸಂಸ್ಕರಿಸಲಾಗಿತ್ತು. ವಿಮಾನ ದುರಂತದ ನೆನಪಿಗಾಗಿ ದುರಂತ ನಡೆದ ಸ್ಥಳದಲ್ಲಿ ಸ್ಮಾರಕ ನಿರ್ಮಿಸಲಾಗಿದ್ದರೂ ಅದನ್ನು ಯಾರೂ ಗಮನಿಸದ ಅವಸ್ಥೆಯಲ್ಲಿ ಈಗ ಇದೆ. ದುರಂತದಲ್ಲಿ ಪ್ರಾಣ ಕಳೆದುಕೊಂಡವರ ಕುಟುಂ ಬಗಳಿಗೆಲ್ಲಾ ಅರ್ಹವಾದ ನಷ್ಟ ಪರಿಹಾರ ಲಭಿಸಲು ಇನ್ನೂ ಬಾಕಿ ಇದೆ. ಮೃತಪಟ್ಟ ಹಲವರ ಕುಟುಂಬ ಈಗಲೂ ಕಾನೂನು ಹೋರಾಟದಲ್ಲಿದೆ.