ಮಂಜೇಶ್ವರ ತಾಲೂಕು ಕಚೇರಿ ಮಂಜೇಶ್ವರದಲ್ಲೇ ಆರಂಭಿಸಲು ಸಿಪಿಐ ಸರಕಾರಕ್ಕೆ ಮನವಿ
ಮಂಜೇಶ್ವರ: ಬಂಗ್ರ ಮಂಜೇಶ್ವರ ದಲ್ಲಿ ಸರ್ವೇ ನಂಬ್ರ ೯೪/೪ರಲ್ಲಿ ಎಕ್ರೆ ೧೪ ಸೆಂಟ್ಸ್ ಸರಕಾರಿ ಸ್ಥಳವಿದ್ದು, ಇದು ಮಂಜೇಶ್ವರ ತಾಲೂಕು ಕಚೇರಿ ಮಿನಿ ಸಿವಿಲ್ ಸ್ಟೇಷನ್ ನಿರ್ಮಾಣಕ್ಕೆ ಸೂಕ್ತ ಸ್ಥಳವೆಂದು ತಿಳಿಸಿ ಸಿಪಿಐ ಮಂಜೇಶ್ವರ ಇದರಿಂದ ಮುಖ್ಯಮಂತ್ರಿ, ಕಂದಾಯ ಸಚಿವ, ಹಣಕಾಸು ಸಚಿವರಿಗೆ ಮನವಿ ನೀಡಲಾಗಿದೆ.
ರಾಜ್ಯ ಸರಕಾರದ ೨೦೧೩ರಲ್ಲಿ ಕಾಸರಗೋಡು ತಾಲೂಕನ್ನು ವಿಭಜಿಸಿ ಮಂಜೇಶ್ವರ ತಾಲೂಕು ರೂಪೀಕರಿಸ ಲಾಗಿದೆ. ಆ ವೇಳೆ ಮಂಜೇಶ್ವರವನ್ನು ಕೇಂದ್ರವೆಂದು ಸೂಚಿಸಲಾಗಿತ್ತು. ಬಳಿಕ ಉಪ್ಪಳ ತಾಲೂಕು ಕೇಂದ್ರವೆಂದು ತಿದ್ದುಪಡಿ ಮಾಡಲಾಗಿದೆ. ಇದರಂತೆ ಮಂಗಲ್ಪಾಡಿ ಪಂ.ನ ಉಪ್ಪಳದ ಖಾಸಗಿ ಕಟ್ಟಡದಲ್ಲಿ ಮೂರನೇ ಮಹಡಿಯಲ್ಲಿ ತಾಲೂಕು ಕಚೇರಿ ಆರಂಭಿಸಲಾಗಿದೆ. ಆದರೆ ಇಲ್ಲಿಗೆ ವೃದ್ಧರಿಗೆ, ಮಹಿಳೆಯರಿಗೆ, ರೋಗಿಗಳಿಗೆ ತಲುಪಲು ಕಷ್ಟವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮಂಜೇಶ್ವರ ತಾಲೂಕು ಕಚೇರಿಯನ್ನು ಸೂಕ್ತ ಸ್ಥಳಕ್ಕೆ ವರ್ಗಾಯಿಸಬೇಕೆಂಬ ಬೇಡಿಕೆ ಹೆಚ್ಚಿದೆ.
ಈ ಹಿನ್ನೆಲೆಯಲ್ಲಿ ಬಂಗ್ರಮಂ ಜೇಶ್ವರದಲ್ಲಿ ತಾಲೂಕು ಕಚೇರಿ ಆರಂಭಗೊಂಡರೆ ಮಂಜೇಶ್ವರ, ವರ್ಕಾಡಿ, ಮೀಂಜ, ಮಂಗಲ್ಪಾಡಿ, ಪೈವಳಿಕೆ, ಪುತ್ತಿಗೆ ಮೊದಲಾದ ಎಲ್ಲಾ ಪಂಚಾಯತ್ನ ಜನರಿಗೂ ಸುಲಭದಲ್ಲಿ ತಲುಪಬಹುದಾಗಿದೆ ಎಂದು ಸಿಪಿಐ ಮನವಿಯಲ್ಲಿ ತಿಳಿಸಿದೆ.
ಮನವಿ ನೀಡಿದ ತಂಡದಲ್ಲಿ ಸಿಪಿಐ ಮಂಡಲ ಕಾರ್ಯದರ್ಶಿ ಜಯರಾಮ ಬಲ್ಲಂಗುಡೇಲ್, ಜಿಲ್ಲಾ ಸಮಿತಿ ಸದಸ್ಯ ರಾಮಕೃಷ್ಣ ಕಡಂಬಾರ್, ಅಜಿತ್ ಎಂ.ಸಿ. ಲಾಲ್ಭಾಗ್, ವರ್ಕಾಡಿ ಪಂ. ಉಪಾಧ್ಯಕ್ಷ ಸಿದ್ದಿಕ್ ಪಾಡಿ ಮಂಜೇಶ್ವರ ಲೋಕಲ್ ಕಾರ್ಯದರ್ಶಿ ಶ್ರೀಧರ್ ಮಾಡ ಭಾಗವಹಿಸಿದ್ದರು. ಮನವಿ ನೀಡಲು ಸಿಪಿಐ ರಾಜ್ಯ ಕಾರ್ಯದರ್ಶಿ ಇ. ಚಂದ್ರಶೇಖರನ್, ರಾಜ್ಯ ಸಮಿತಿ ಸದಸ್ಯ ಗೋವಿಂದನ್ ಪಳ್ಳಿಕಾಪಿಲ್ ಸಹ ಕರಿಸಿದರು. ಮನವಿ ಸ್ವೀಕರಿಸಿದ ಮುಖ್ಯ ಮಂತ್ರಿ ಪಿಣರಾಯಿ ವಿಜಯನ್, ಕಂದಾಯ ಸಚಿವರು ಮಂಜೇಶ್ವರದಲ್ಲೇ ತಾಲೂಕು ಕಚೇರಿ ಆರಂಭಿಸುವ ಭರವಸೆ ತಂಡಕ್ಕೆ ನೀಡಿದರು.