ಮದ್ಯದಮಲಿನಲ್ಲಿ ಹೆತ್ತಬ್ಬೆಯನ್ನೇ ತುಳಿದು ಕೊಂದ ಪುತ್ರ: ಪೊಲೀಸ್ ಕಸ್ಟಡಿಗೆ
ತಿರುವನಂತಪುರ: ಮದ್ಯದಮಲಿನಲ್ಲಿ ಹೆತ್ತ ತಾಯಿಯನ್ನೇ ಪುತ್ರ ಕಾಲಿನಿಂದ ತುಳಿದು ಕೊಲೆಗೈದ ಘಟನೆ ತಿರುವನಂತಪುರದಲ್ಲಿ ನಿನ್ನೆ ರಾತ್ರಿ ನಡೆದಿದೆ. ತಿರುವನಂತಪುರ ನಡುಮಂಹಾಡ್ ವಟ್ಟಪ್ಪಾರ ತೇಕೆಡ ನಿವಾಸಿ ಓಮನ (75) ಕೊಲೆಗೀಡಾದ ತಾಯಿ. ಇದಕ್ಕೆ ಸಂಬಂಧಿಸಿ ಆಕೆಯ ಪುತ್ರ ಮಣಿಕಂಠನ್ ನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಮದ್ಯದಮಲಿನಲ್ಲಿ ನಿನ್ನೆ ರಾತ್ರಿ ಮನೆಗೆ ಬಂದ ಆರೋಪಿ ತಾಯಿ ಓಮನಳೊಂದಿಗೆ ಜಗಳಕ್ಕಿಳಿದು ಹೊಡೆದು ಬೀಳಿಸಿದ ನಂತರ ಕಾಲಿನಿಂದ ತುಳಿಯತೊಡಗಿದನು. ಆಕೆಯ ಬೊಬ್ಬೆ ಕೇಳಿ ನೆರೆಮನೆಯವರು ಓಡಿ ಬಂದಾಗ ಓಮನ ಗಂಭೀರಾವಸ್ಥೆಯಲ್ಲಿ ಬಿದ್ದಿರುವುದನ್ನು ಕಂಡರು. ತಕ್ಷಣ ಆಕೆಯನ್ನು ತಿರುವನಂತಪುರ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸಾಗಿಸಿ ತುರ್ತು ಚಿಕಿತ್ಸೆ ನೀಡಿದರೂ ಅದು ಫಲಕಾರಿಯಾಗದೆ ರಾತ್ರಿ 11.30 ವೇಳೆ ಆಕೆ ಸಾವನ್ನಪ್ಪಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಪುತ್ರ ಈ ಹಿಂದೆಯೂ ತಾಯಿಗೆ ಹಲ್ಲೆ ನಡೆಸಿದ್ದನೆಂದು ನೆರೆಮನೆಯವರು ತಿಳಿಸಿದ್ದಾರೆ.