ರಸ್ತೆ ಬದಿ ಹೊಂಡ ತೋಡಿ ಮುಚ್ಚಲು ಕ್ರಮವಿಲ್ಲ: ನಗರದಲ್ಲಿ ವಾಹನ ಸಂಚಾರಕ್ಕೆ ಅಡಚಣೆ, ಜಲ ಪ್ರಾಧಿಕಾರದ ನಿರ್ಲಕ್ಷ್ಯ- ಆರೋಪ
ಕಾಸರಗೋಡು: ನಗರದ ನಾಯಕ್ಸ್ ರಸ್ತೆಯಲ್ಲಿ ನೀರಿನ ಪೈಪು ಅಳವಡಿಸಲು ತೋಡಿದ ಹೊಂಡ ಮುಚ್ಚುಗಡೆಗೊಳಿಸದಿರುವುದು ಸಮಸ್ಯೆಗೆ ಕಾರಣವಾಗಿದೆ. ಹಲವು ದಿನಗಳ ಹಿಂದೆ ಜಲ ಪ್ರಾಧಿಕಾರ ರಸ್ತೆ ಬದಿ ಹೊಂಡ ತೋಡಿತ್ತು. ಅರ್ಧ ಭಾಗ ಪೈಪ್ ಅಳವಡಿಸಿದ್ದು, ಬಹುತೇಕ ಭಾಗ ಇನ್ನೂ ಬಾಕಿಯಿದೆ. ಈ ಕೆಲಸ ಪೂರ್ತಿಗೊಳಿಸಿ ಹೊಂಡ ಮುಚ್ಚುಗಡೆಗೊಳಿಸಲು ಕ್ರಮ ಕೈಗೊಳ್ಳದಿರುವುದು ಸಮಸ್ಯೆಗೆ ಕಾರಣವೆನ್ನಲಾಗಿದೆ. ರಸ್ತೆ ಬದಿ ಹೊಂಡ ತೋಡಿರುವುದರಿಂದ ಒಂದೆಡೆ ವಾಹನಗಳ ಸಂಚಾರಕ್ಕೆ ಸಮಸ್ಯೆ ಎದುರಾಗುತ್ತಿದೆ. ಅಲ್ಲದೆ ರಸ್ತೆ ಬದಿಯಲ್ಲಿರುವ ವ್ಯಾಪಾರ ಸಂಸ್ಥೆಗಳಿಗೆ ಗ್ರಾಹಕರಿಗೆ ತೆರಳಲು ಸಾಧ್ಯವಾಗದ ಸ್ಥಿತಿ ಉಂಟಾಗಿದೆ. ಇದೇ ವೇಳೆ ಹೊಂಡದಿಂದಾಗಿ ಸಾರಿಗೆ ಅಡಚಣೆ ಎದುರಾದಾಗ ರಸ್ತೆ ಬದಿಯ ಸ್ಲ್ಯಾಬ್ನ ಮೇಲೆ ಲಾರಿಯೊಂದು ಹತ್ತಿದ್ದು, ಈ ವೇಳೆ ಸ್ಲ್ಯಾಬ್ ಕೂಡಾ ಕುಸಿದು ಬಿದ್ದಿರುವುದು ಮತ್ತಷ್ಟು ಸಮಸ್ಯೆಗೆ ಕಾರಣವಾಗಿದೆ. ಹೊಂಡ ಮುಚ್ಚಿ ಸಮಸ್ಯೆಗೆ ಶೀಘ್ರ ಪರಿಹಾರ ಕಾಣಬೇಕೆಂದು ವ್ಯಾಪಾರಿಗಳ ಸಹಿತ ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.