ರಾಷ್ಟ್ರೀಯ ಹೆದ್ದಾರಿ ಸರ್ವೀಸ್ ರಸ್ತೆ, ಒಳ ರಸ್ತೆ ಬದಿಗಳಲ್ಲಿ ತುಂಬಿ ತುಳುಕುತ್ತಿರುವ ತ್ಯಾಜ್ಯ ರಾಶಿ; ದುರ್ವಾಸನೆಯಿಂದ ಸಂಚಾರ ಸಮಸ್ಯೆ

ಉಪ್ಪಳ; ಜನತೆಯಲ್ಲಿ ಎಷ್ಟೇ ಜಾಗೃತಿ ಮೂಡಿಸಿದರೂ ಕಸವನ್ನು ಎಲ್ಲೆಂದರಲ್ಲಿ ಎಸೆಯುವುದು ಇನ್ನೂ ಕಡಿಮೆಗೊಂಡಿಲ್ಲ. ತೂಮಿನಾಡು, ಪೊಸೋಟು, ಕೈಕಂಬ ಮೊದಲಾದ ಸರ್ವೀಸ್ ರಸ್ತೆ ಬದಿಗಳಲ್ಲಿ ಹಾಗೂ ನಯಾಬಜಾರ್-ಸೋಂಕಾಲು, ಕುದುಕೋಟಿ, ಮಣ್ಣಂಗುಳಿ ಮೈದಾನ ಮೊದಲಾದ ಒಳ ರಸ್ತೆಗಳಲ್ಲಿ ತ್ಯಾಜ್ಯ ರಾಶಿ ಕಂಡುಬರುತ್ತಿದ್ದು, ದುರ್ವಾಸನೆ ಬೀರುತ್ತಿದೆ. ಇದರಿಂದ ವಾಹನ ಸಹಿತ ನಡೆದು ಹೋಗುವ ಜನರು ಉಸಿರುಗಟ್ಟಿ ಸಂಚರಿಸಬೇಕಾದ ಅವಸ್ಥೆ ಉಂಟಾಗಿರುವುದಾಗಿ ದೂರಲಾಗಿದೆ. ಸ್ವಚ್ಛ ಮಂಜೇಶರ, ಸ್ವಚ್ಛ ಮಂಗಲ್ಪಾಡಿ ಮಾಡುವುದಾಗಿ ಹೇಳಲಾಗುತ್ತಿದ್ದರೂ   ಪಂಚಾಯತ್ ಚುನಾವಣೆಗೆ ಇನ್ನು ತಿಂಗಳುಗಳು ಬಾಕಿ ಉಳಿದಿದ್ದರೂ ಅಧಿಕಾರ ವಹಿಸಿಕೊಂಡವರು ಇದು ವರೆಗೂ  ಗಾಢ ನಿದ್ರೆಯಿಂದ ಎಚ್ಚೆತ್ತು ಕೊಂಡಿಲ್ಲವೆಂದು ಜನರು ಆಡಿಕೊಳ್ಳು ತ್ತಿದ್ದಾರೆ. ಪಂಚಾಯತ್‌ಗಳು ತ್ಯಾಜ್ಯವನ್ನು ತೆರವುಗೊಳಿಸಿ ಇಲ್ಲಿ ಕಸ ಎಸೆಯಬಾರದೆಂದು ಕೆಲವೆಡೆ ಬ್ಯಾನರ್ ಸ್ಥಾಪಿಸುತ್ತಿದ್ದರೂ ಅಲ್ಲಿಯೇ ಕಸವನ್ನು ಎಸೆದು ಸಾಮರ್ಥ್ಯ ತೋರಿಸುತ್ತಿ ರುವುದು ಕಂಡುಬರುತ್ತಿದೆ.  ಪಂಚಾ ಯತ್ ಅಧಿಕೃತರು ಇನ್ನಾದರೂ ಸರ್ವೀಸ್ ರಸ್ತೆ ಸಹಿತ ಒಳ ರಸ್ತೆಯ ಅಲ್ಲಲ್ಲಿ ಸಿಸಿ ಕ್ಯಾಮರವನ್ನು ಇರಿಸಿ ತ್ಯಾಜ್ಯ ಎಸೆಯುವವರನ್ನು ಪತ್ತೆಹಚ್ಚಿ ದಂಡ ವಿಧಿಸುವ ಕ್ರಮಕ್ಕೆ  ಮುಂದಾಗಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

You cannot copy contents of this page