ರೈಲು ಹಳಿ ಮೇಲೆ ಕಲ್ಲು, ಮರದ ತುಂಡುಗಳನ್ನಿರಿಸಿ ಬುಡಮೇಲು ಕೃತ್ಯಕ್ಕೆ ಯತ್ನಿಸಿದ ಆರೋಪಿ ಸೆರೆ
ಕಾಸರಗೋಡು: ಕೋಟಿಕುಳಂ-ತೃಕ್ಕನ್ನಾಡ್ ಮಧ್ಯೆ ಉದುಮ ರೈಲ್ವೇ ಗೇಟ್ ಬಳಿ ಹಾಗೂ ಹೊಸದುರ್ಗ ಕಾಸರಗೋಡು ಡೌನ್ಲೈನ್ ರೈಲು ಹಳಿಯಲ್ಲಿ ಕಲ್ಲುಗಳು, ಮರದ ತುಂಡುಗಳನ್ನು ಇರಿಸಿ ರೈಲು ಬುಡಮೇಲುಕೃತ್ಯಕ್ಕೆತ್ನಿಸಿದ ಪ್ರಕರಣದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಅರ್ಮುಳ ಇರಂತ್ತೂರು ನಿವಾಸಿ ಜೋಜಿ ಥೋಮಸ್ (29) ಬಂಧಿತ ಆರೋಪಿ. ಎಪ್ರಿಲ್ 17ರಂದು ಮುಂಜಾನೆ ಬುಡಮೇಲುಯತ್ನ ಕೃತ್ಯ ನಡೆದಿತ್ತು. ನಿಜಾಮುದ್ದೀನ್ ಸೂಪರ್ ಫಾಸ್ಟ್ ರೈಲುಗಾಡಿ ಆ ದಾರಿಯಾಗಿ ಸಾಗುವ ವೇಳೆ ಈ ಯತ್ನ ನಡೆಸಲಾಗಿತ್ತು. ಆ ಬಗ್ಗೆ ಪ್ರಸ್ತುತ ರೈಲಿನ ಸೀನಿಯರ್ ಸೆಕ್ಷನ್ ಇಂಜಿನಿಯರ್ ಬೇಕಲ ಪೊಲೀಸರಿಗೆ ದೂರು ನೀಡಿದ್ದರು. ಅದರಂತೆ ರೈಲ್ವೇ ಆಕ್ಟ್ 150(1)(ಎ) ಮತ್ತು 147 ಎಂಬೀ ಸೆಕ್ಷನ್ಗಳ ಪ್ರಕಾರ ಪೊಲೀಸರು ಪ್ರಕರಣ ದಾಖಲಿಸಿ ಕೊಂಡಿದ್ದಾರೆ. ರೈಲು ಬುಡಮೇಲು ಕೃತ್ಯಕ್ಕೆ ಯತ್ನಿಸಿದ ವೇಳೆ ಆರೋಪಿ ರೈಲು ಹಳಿಯಲ್ಲಿ ಶಂಕಾಸ್ಪದ ರೀತಿಯಲ್ಲಿ ತಿರುಗಾಡುತ್ತಿರುವುದನ್ನು ಗಮನಿಸಿದ ಊರವರು ಆತನನ್ನು ಹಿಡಿದು ಬೇಕಲ ಪೊಲೀಸರಿಗೆ ಒಪ್ಪಿಸಿದ್ದರು. ನಂತರ ಪೊಲೀಸರು ಆತನನ್ನು ತೀವ್ರ ವಿಚಾರಣೆಗೊಳಪಡಿಸಿದಾಗ ರೈಲು ಹಳಿಗಳಲ್ಲಿ ಕಲ್ಲು ಮತ್ತು ಮರದ ತುಂಡುಗಳನ್ನು ಇರಿಸಿರುವುದು ನಾನೇ ಎಂದು ಆತ ಪೊಲೀಸರಲ್ಲಿ ತಪ್ಪೊಪ್ಪಿಕೊಂಡಿದ್ದಾನೆ. ಅದರಂತೆ ಪೊಲೀಸರು ಆತನ ವಿರುದ್ಧ ಪ್ರಕರಣ ದಾಖಲಿಸಿ ಬಂಧನ ದಾಖಲಿಸಿಕೊಂ ಡಿದ್ದಾರೆ. ಬಂಧಿತನನ್ನು ಬಳಿಕ ನ್ಯಾಯಾಲಯದಲ್ಲಿ ಹಾಜರುಪಡಿಸಿದ ನಂತರ ನ್ಯಾಯಾಲಯದ ನಿರ್ದೇಶ ಪ್ರಕಾರ ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ.
ಬೇಕಲ ಡಿವೈಎಸ್ಪಿ ಮನೋಜ್ ವಿ.ವಿ ಮತ್ತು ಬೇಕಲ ಪೊಲೀಸ್ ಠಾಣಾಧಿಕಾರಿ ಡಾ. ಅಪರ್ಣಾ (ಐಪಿಎಸ್) ಎಂಬವರ ಮೇಲ್ನೋಟದಲ್ಲಿ ಬೇಕಲ ಪೊಲೀಸ್ ಇನ್ಸ್ಪೆಕ್ಟರ್ ಶೈನ್ ಕೆ.ಪಿ, ಎಸ್.ಐ. ಸವ್ಯಸಾಚಿ ನೇತೃತ್ವದ ಪೊಲೀಸರ ತಂಡ ಆರೋಪಿಯನ್ನು ಬಂಧಿಸಿದೆ.