ವಿಮಾನ ದುರಂತ ತನಿಖೆಗೆ ಉನ್ನತ ಮಟ್ಟದ ಸಮಿತಿ ರಚನೆ
ನವದೆಹಲಿ: ಗುಜರಾತಿನ ಅಹ ಮ್ಮದಾಬಾದ್ನಿಂದ ಲಂಡನ್ಗೆ ಹೋಗುತ್ತಿದ್ದ ಮಾರ್ಗದಲ್ಲಿ ಸಂಭವಿಸಿದ ಏರ್ ಇಂಡಿಯಾ ವಿಮಾನ ಅಪಘಾತ ಕಾರಣಗಳನ್ನು ತನಿಖೆ ಮಾಡಲು ನಾಗರಿಕ ವಿಮಾನಯಾನ ಸಚಿವಾಲಯ ಉನ್ನತ ಮಟ್ಟದ ಸಮಿತಿ ರಚಿಸಿದೆ. ಈ ಅಪಘಾತಕ್ಕೆ ಕಾರಣವಾದ ಸಂದರ್ಭ ಗಳನ್ನು ಸಮಿತಿ ನಿರ್ಣಯಿಸಲಿದೆ. ಜ್ಯಾರಿಯಲ್ಲಿರುವ ಪ್ರಮಾಣಿತ ಕಾರ್ಯಾಚರಣಾ ಕಾರ್ಯವಿಧಾನಗಳು (ಎಸ್ಒಪಿ) ಮತ್ತು ಸುರಕ್ಷಾ ಮಾರ್ಗಸೂಚಿಗಳನ್ನು ಈ ಸಮಿತಿ ಮೌಲ್ಯಮಾಪನ ನಡೆಸಲಿದೆ ಎಂದು ನಾಗರಿಕ ವಿಮಾನ ಯಾನ ಸಚಿವಾಲಯ ತನ್ನ ಎಕ್ಸ್ ಪೋಸ್ಟ್ನಲ್ಲಿ ತಿಳಿಸಿದೆ.
ಭವಿಷ್ಯದಲ್ಲಿ ಇದೇ ರೀತಿಯ ವಾಯುಯಾನ ಘಟನೆಗಳನ್ನು ತಡೆ ಗಟ್ಟಲು ಮತ್ತು ಪರಿಣಾಮಕಾರಿಯಾಗಿ ನಿರ್ವಹಿಸಲು ದೃಢವಾದ ಚೌಕಟ್ಟನ್ನು ಶಿಫಾರಸ್ಸು ಮಾಡುವುದು ಈ ಸಮಿತಿಯ ಪ್ರಾಥಮಿಕ ಉದ್ದೇಶವಾಗಿದೆ. ಈ ಸಮಿತಿಯ ಸಂಬಂಧಿತ ಸಂಸ್ಥೆಗಳು ನಡೆಸುವ ಇತರ ರೀತಿಯ ತನಿಖೆಗಳು ಮತ್ತು ವಿಚಾರಣೆಗಳಿಗೆ ಪರ್ಯಾಯ ವಾಗಿರುವುದಿಲ್ಲ. ಆದರೆ ಭವಿಷ್ಯದಲ್ಲಿ ಅಂತಹ ಘಟನೆಗಳನ್ನು ತಡೆಗಟ್ಟಲು ಮತ್ತು ನಿರ್ವಹಿಸಲು ಎಸ್ಪಿಒಗಳನ್ನು ರೂಪೀಕರಿಸಲಾಗುವುದು. ದೇಶದಲ್ಲಿ ಈ ಹಿಂದೆ ನಡೆದ ವಿಮಾನ ದುರಂತಗಳ ದಾಖಲೆಗಳನ್ನು ಸಮಿತಿ ಪರಿಶೀಲಿಸಲಿದೆ. ಅಪಘಾತದ ನಂತರ ಘಟನೆ ನಿರ್ವಹಣೆ ಮತ್ತು ಅದನ್ನು ನಿಭಾಯಿಸಲು ಕೇಂದ್ರ ಮತ್ತು ರಾಜ್ಯ ಸರಕಾರಗಳ ಎಲ್ಲಾ ಸಂಸ್ಥೆಗಳು ಮತ್ತು ಅವುಗಳ ಪಾತ್ರಗಳನ್ನು ಸೂಚಿಸುವ ಪ್ರಮಾಣಿತ ಕಾರ್ಯವಿಧಾನಗಳನ್ನು ಸಮಿತಿ ರೂಪು ನೀಡಲಿದೆಯೆಂದು ಸಚಿವಾಲಯ ತಿಳಿಸಿದೆ.
ಅಹಮ್ಮದಾಬಾದ್ನಲ್ಲಿ ಪತನಗೊಂಡ ವಿಮಾನದ ಬ್ಲಾಕ್ ಬಾಕ್ಸ್ ನಿನ್ನೆ ಪತ್ತೆಹಚ್ಚಲಾಗಿದೆ.
ತಜ್ಞರ ಸಮಿತಿ ತಂಡ ಅದನ್ನು ಪರಿಶೀಲಿಸುತ್ತಿದೆ. ತನಿಖೆ ವರದಿ ಹೊರಬಂದ ಬಳಿಕವಷ್ಟೇ ವಿಮಾನ ದುರಂತ ಹೇಗೆ ಸಂಭವಿಸಿತ್ತು ಎಂಬುದರ ಕಾರಣ ತಿಳಿಯಲು ಸಾಧ್ಯವಾಗಲಿದೆ.