ಹೆಚ್ಚುತ್ತಿರುವ ಕಳ್ಳತನ: ಬೇಕೂರು ಪರಿಸರ ನಿವಾಸಿಗಳಿಗೆ ಆತಂಕ

ಉಪ್ಪಳ:  ಮಂಜೇಶ್ವರ, ಉಪ್ಪಳ ಸಹಿತ ಪರಿಸರ ಪ್ರದೇಶಗಳಲ್ಲಿ ಕಳವು ವ್ಯಾಪಕಗೊಂಡಿರುವಂತೆ ಬೇಕೂರು ಪರಿಸರದಲ್ಲೂ ಕಳವು ನಡೆದಿದ್ದು, ಸ್ಥಳೀಯರು ಭೀತಿಯಲ್ಲಿದ್ದಾರೆ. ಇತ್ತೀಚೆಗೆ ಬೇಕೂರು ಶಾಲಾ ಸಮೀಪದ ಬಸ್ ನಿಲ್ದಾಣ ಬಳಿಯಿರುವ ಮುಸ್ತಫ ಎಂಬವರ ಜನರಲ್ ಸ್ಟೋರ್‌ನ ಶಟರ್ ಮುರಿದು ಒಳನುಗ್ಗಿ ಕಾಣಿಕೆ ಡಬ್ಬಿ ಹಾಗೂ ಮೇಜಿನ ಡ್ರವರ್‌ನಲ್ಲಿರಿಸಿದ್ದ ಹಣವನ್ನು ದೋಚಿದ್ದಾರೆ. ಒಟ್ಟು 21,000 ರೂ. ಕಳವು ನಡೆಸಿರಬೇಕೆಂದು ದೂರಿದ್ದಾರೆ. ಈ ಬಗ್ಗೆ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿ, ಸ್ಥಳಕ್ಕೆ ತಲುಪಿ ತನಿಖೆ ನಡೆಸಿದ್ದಾರೆ.

ಇದೇ ಪರಿಸರದಲ್ಲಿ ಅಧ್ಯಾಪಕ ರೋರ್ವರ ಬಾಡಿಗೆ ಕೊಠಡಿಯ ಬೀಗವನ್ನೂ ಮುರಿಯಲಾಗಿದೆ. ಆದರೆ ಅಧ್ಯಾಪಕ ಸ್ಥಳದಲ್ಲಿಲ್ಲದ ಕಾರಣ ಕಳವು ಹೋದ ವಸ್ತುಗಳ ಬಗ್ಗೆ ಇನ್ನಷ್ಟೇ ತಿಳಿದು ಬರಬೇಕಾಗಿದೆ. ಈ ಘಟನೆಗಳಿಂದ ಪರಿಸರದ ಜನರಲ್ಲಿ ಆತಂಕ ವುಂಟಾಗಿದ್ದು, ಬೇಕೂರು, ಸೋಂಕಾಲು, ಸುಭಾಷ್‌ನಗರ ಮೊದಲಾದೆಡೆಗಳಲ್ಲಿ ಪೊಲೀಸರು ರಾತ್ರಿ ಗಸ್ತು ನಡೆಸಬೇಕೆಂದು ಊರವರು ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page