16ರ ಹರೆಯದ ಬಾಲಕಿಯನ್ನು ಅಪಹರಿಸಿದ ಆರೋಪಿ ಬಂಧನ

ಕಾಸರಗೋಡು: ಜಿಲ್ಲೆಯ ಮಲೆನಾಡು ಪ್ರದೇಶದಲ್ಲಿ  ವಾಸಿಸುವ ಹದಿನಾರರ ಹರೆಯದ ಬಾಲಕಿಯನ್ನು ಅಪಹರಿಸಿದ ಯುವಕನನ್ನು ಬಂಧಿಸಲಾಗಿದೆ.

ಕಣ್ಣೂರು ತಯ್ಯಿಲ್ ಕುರುವ ನಿವಾಸಿ ಉವೈಸ್ (16) ಎಂಬಾತನನ್ನು ಕಣ್ಣೂರು ನಗರಠಾಣೆ ಇನ್‌ಸ್ಪೆಕ್ಟರ್ ಶ್ರೀಜಿತ್ ನೇತೃತ್ವದ ತಂಡ ಸೆರೆಹಿಡಿದಿದೆ.  ಬಾಲಕಿ ಕಣ್ಣೂರು ಜಿಲ್ಲೆಯ ಹಾಸ್ಟೆಲೊಂದರಲ್ಲಿ ವಾಸಿಸಿ ಕಲಿಯುತ್ತಿದ್ದಾಳೆ. ಅಗೋಸ್ತ್ 16ರಂದು ತಂದೆ ಜೊತೆಗೆ ಹಾಸ್ಟೆಲ್‌ನಿಂದ ತೆರಳಿದ್ದರು. ಆದರೆ ಕಣ್ಣೂರು ರೈಲ್ವೇ ನಿಲ್ದಾಣಕ್ಕೆ ತಲುಪಿದಾಗ ಆಕೆ ನಾಪತ್ತೆಯಾಗಿದ್ದಳು.  ಬಳಿಕ ತಂದೆಯ ಮೊಬೈಲ್‌ಗೆ ಕರೆ ಮಾಡಿ ತನ್ನನ್ನು ಹುಡುಕಬೇಡಿ ಎಂದು ತಿಳಿಸಿದ್ದಳನ್ನಲಾಗಿದೆ.  ಈ ಬಗ್ಗೆ ತಂದೆ ನೀಡಿದ ದೂರಿನಂತೆ ಪೊಲೀಸರು ನಡೆಸಿದ ತನಿಖೆಯಲ್ಲಿ ಬಾಲಕಿಯನ್ನು ಉವೈಸ್ ಅಪಹರಿಸಿದ್ದಾನೆಂದು ತಿಳಿದುಬಂದಿದೆ. ಉವೈಸ್ ಹಾಗೂ ಬಾಲಕಿ ವಯನಾಡ್‌ನಲ್ಲಿರುವುದಾಗಿ ಮಾಹಿತಿ ಲಭಿಸಿದ್ದು, ಇದರಂತೆ ಪೊಲೀಸರು ಅಲ್ಲಿಗೆ ತೆರಳಿದ್ದಾರೆ. ಇದೇ ವೇಳೆ ಪೊಲೀಸರು ತನ್ನನ್ನು ಹಿಂಬಾಲಿಸುತ್ತಿದ್ದಾರೆಂದು ತಿಳಿದ ಉವೈಸ್ ಬಾಲಕಿಯೊಂದಿಗೆ ಬೆಂಗಳೂರಿಗೆ ಪಲಾಯನಗೈದಿದ್ದನು. ಆದರೆ ಪೊಲೀಸರು ಅತೀ ಸಾಹಸದಿಂದ ಅವರನ್ನು ಹಿಂಬಾಲಿಸಿ ಅವರಿಬ್ಬರನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

RELATED NEWS

You cannot copy contents of this page