ಕಾಸರಗೋಡು: 2022 ಫೆಬ್ರವರಿ 4ರಂದು ರಾತ್ರಿ ಕಾಸರಗೋಡು ಮೊಗ್ರಾಲ್ ಪುತ್ತೂರಿಗೆ ಸಮೀಪದ ಚೌಕಿ ಪೆಟ್ರೋಲ್ ಬಂಕ್ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಆಟೋ ರಿಕ್ಷಾದಲ್ಲಿ ಸಾಗಿಸುತ್ತಿದ್ದ 22.5 ಕಿಲೋ ಗಾಂಜಾವನ್ನು ಕಾಸರಗೋಡು ಪೊಲೀಸರು ವಶಪಡಿ ಸಿದ ಪ್ರಕರಣದ ಮೂವರು ಆರೋಪಿ ಗಳಿಗೆ ಕಾಸರಗೋಡು ಹೆಚ್ಚುವರಿ ಜಿಲ್ಲಾ ಸೆಶನ್ಸ್ ನ್ಯಾಯಾಲಯ (ದ್ವಿತೀಯ)ದ ನ್ಯಾಯಾಧೀಶೆ ಕೆ. ಪ್ರಿಯಾ ಅವರು ತಲಾ ಹತ್ತು ವರ್ಷ ಕಠಿಣ ಸಜೆ ಹಾಗೂ ಒಂದು ಲಕ್ಷ ರೂ.ನಂತೆ ಜುಲ್ಮಾನೆ ವಿಧಿಸಿ ತೀರ್ಪು ನೀಡಿದ್ದಾg.
ನೆಲ್ಲಿಕಟ್ಟೆ ಅಮೂಸ್ ನಗರದ ಅಬ್ದುಲ್ ರಹಿಮಾನ್ (55), ಪೆರುಂಬಳ ಕಡವು ಕಬೀರ್ ಮಂಜಿಲ್ನ ಅಹಮ್ಮದ್ ಕಬೀರ್ ಸಿ.ಎ.(43) ಮತ್ತು ಆದೂರು ಕುಂಟಾರು ಪೊಕರಡ್ಕ ಮಂಜಿಲ್ನ ಮುಹಮ್ಮದ್ ಹಾರೀಸ್ ಕೆ.ಪಿ. (40) ಎಂಬವರಿಗೆ ಈ ಶಿಕ್ಷೆ ವಿಧಿಸಲಾಗಿದೆ. ಜುಲ್ಮಾನೆ ಪಾವತಿಸದಿ ದ್ದಲ್ಲಿ ಆರೋಪಿಗಳು ಮೂರು ತಿಂಗಳ ಹೆಚ್ಚುವರಿ ಸಜೆ ಅನುಭವಿಸಬೇಕಾಗಿದೆ ಎಂದು ತೀರ್ಪಿನಲ್ಲಿ ತಿಳಿಸಲಾಗಿದೆ.
ಕಾಸರಗೋಡು ಪೊಲೀಸ್ ಠಾಣೆಯ ಎಸ್ಐ ಆಗಿದ್ದ ಪಿ. ಮಧುಸೂದನನ್, ಎಸ್ಐ ಕೃಷ್ಣನ್ ಕೊಟ್ಟಲಕಂಡಿ, ಇತರ ಪೊಲೀಸರಾದ ಫಿಲಿಪ್ ಥೋಮಸ್, ಸುರೇಶ್, ಸನೀಶ್ ಜೋಸೆಫ್ ಎಂಬ ರನ್ನೊಳಗೊಂಡ ಪೊಲೀಸರ ತಂಡ ಗಾಂಜಾ ಮತ್ತು ಆಟೋ ರಿಕ್ಷಾ ಸಹಿತ ಆರೋಪಿಗಳನ್ನು ಅಂದು ಬಂಧಿಸಿತ್ತು. ಅಂದು ವಿದ್ಯಾನಗರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಆಗಿದ್ದ, ಈಗ ಬೇಕಲ ಡಿವೈಎಸ್ಪಿಯಾಗಿರುವ ವಿ.ವಿ. ಮನೋಜ್ ಈ ಬಗ್ಗೆ ಮುಂದಿನ ತನಿಖೆ ನಡೆಸಿದ್ದರು. ನಂತರ ಅಂದು ಕಾಸರಗೋಡು ಪೊಲೀಸ್ ಇನ್ಸ್ಪೆಕ್ಟರ್ ಆಗಿದ್ದ ಪಿ. ಅಜಿತ್ ಕುಮಾರ್ ನ್ಯಾಯಾಲಯದಲ್ಲಿ ಈ ಪ್ರಕರಣದ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಪ್ರೋಸಿಕ್ಯೂಷನ್ ಪರ ಹೆಚ್ಚುವರಿ ಸರಕಾರಿ ಪ್ಲೀಡರ್ ಜಿ. ಚಂದ್ರಮೋಹನ್ ಮತ್ತು ನ್ಯಾಯವಾದಿ ಚಿತ್ರಕಲ ನ್ಯಾಯಾಲಯದಲ್ಲಿ ವಾದಿಸಿದ್ದರು.







