ಕಾಸರಗೋಡು: ತಮಿಳುನಾಡಿ ನಿಂದ ಕೇರಳಕ್ಕೆ ಸಾಗಿಸುತ್ತಿದ್ದ 232 ಕಿಲೋ ಗಾಂಜಾವನ್ನು ತಮಿಳುನಾಡು ವಿಲ್ಲುಪುರಂ ತಿಂಡಿವನಕ್ಕೆ ಸಮೀಪದಿಂದ ಒಲಕ್ಕೂರ್ ಪೊಲೀಸರು ಪತ್ತೆಹಚ್ಚಿ ವಶಕ್ಕೆ ತೆಗೆದುಕೊಂಡಿದ್ದಾರೆ.
ಇದಕ್ಕೆ ಸಂಬಂಧಿಸಿ ಕಾಸರಗೋಡು ಜಿಲ್ಲೆಯ ಪಾಣತ್ತೂರು ಪೆರಿಯಾರತ್ತ್ನ ಉದಯ ಕುಮಾರ್ (44) ಮತ್ತು ಪೆರಿಯ ಮನಾಂಕಡವಿನ ಆಸಿಫ್ (25) ಎಂಬಿಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಆಂಧ್ರಪ್ರದೇಶದಿಂದ ಬರುತ್ತಿದ್ದ ಪಿಕ್ಅಪ್ ವಾಹನದಲ್ಲಿ ತಲಾ 116 ಪ್ಯಾಕೆಟ್ಗಳಲ್ಲಾಗಿ ತುಂಬಿಸಿ ಈ ಗಾಂಜಾವನ್ನು ಸಾಗಿಸಲಾಗುತ್ತಿತ್ತೆಂದು ಅಲ್ಲಿನ ಪೊಲೀಸರು ತಿಳಿಸಿದ್ದಾರೆ.
ಸಾಧಾರಣವಾಗಿ ಕೇರಳಕ್ಕೆ ಆಂಧ್ರಪ್ರದೇಶದಿಂದಲೇ ಅತೀ ಹೆಚ್ಚು ಗಾಂಜಾ ಸಾಗಿಸಲಾಗುತ್ತಿದೆ. ಗಾಂಜಾವನ್ನು ಕರ್ನಾಟಕ ಮೂಲಕವಾಗಿ ಕಾಸರಗೋಡಿಗೆ ಸಾಗಿಸಲಾಗುತ್ತಿದೆ. ಮಾತ್ರವಲ್ಲ ಒಡಿಸ್ಸಾದಿಂದಲೂ ಜಿಲ್ಲೆಗೆ ಗಾಂಜಾ ಸಾಗಿಸುತ್ತಿರುವ ತಂಡಗಳೂ ಕಾರ್ಯವೆಸಗುತ್ತಿವೆ ಎಂಬ ಮಾಹಿತಿಯೂ ಪೊಲೀಸರಿಗೆ ಲಭಿಸಿದೆ.
ಕೇರಳದಲ್ಲಿ ಇಡುಕ್ಕಿ ಜಿಲ್ಲೆಯ ಒಳಪ್ರದೇಶಗಳಲ್ಲಿ ವ್ಯಾಪಕವಾಗಿ ಗಾಂಜಾ ಕೃಷಿ ನಡೆಸಲಾಗುತ್ತಿದೆ ಎಂದು ಅಬಕಾರಿ ಇಲಾಖೆಗೂ ಮಾಹಿತಿ ಲಭಿಸಿದೆ.







