ಕಾಸರಗೋಡು: ಮನೆಯವರು ಉತ್ಸವಕ್ಕೆ ಹೋದ ಸಂದರ್ಭದಲ್ಲಿ ೨೫ ಪವನ್ ಚಿನಾಭರಣ ಕಳವುಗೈದ ಕುಖ್ಯಾತ ಇಬ್ಬರು ಕಳ್ಳರನ್ನು ಬಂಧಿಸಲಾಗಿದೆ. ಬೇಕಲ ಪೊಲೀಸ್ ಠಾಣೆ ವ್ಯಾಪ್ತಿಯ ಪೆರಿಯಾಟಡ್ಕ, ಚೆರುಂಬಾ ಅಹದ್ ಮಂಜಿಲ್ನ ಎ.ಎಚ್. ಹಾಶಿಂ (45), ಕಾಸರಗೋಡು ವಿದ್ಯಾನಗರದ ಮನೋಜ್ (49) ಎಂಬಿವರನ್ನು ಪಟ್ಟಾಂಬಿ ಪೊಲೀಸರು ಬಂಧಿಸಿದ್ದಾರೆ. ಕಳೆದ ಶುಕ್ರವಾರ ಶೋರ್ನೂರು ಕುಟ್ಟನಾಡು ತೊಳುಕ್ಕಾಡ್ ಹರಿ ಭವನ್ನ ಸುಧೀರ್ ಎಂಬವರ ಮನೆಯಿಂದ ಚಿನ್ನಾಭರಣ ಕಳವು ನಡೆದಿದೆ. ಸುಧೀರ್ ಹಾಗೂ ಕುಟುಂಬ ಆಮಕ್ಕಾವ್ ಕ್ಷೇತ್ರಕ್ಕೆ ಉತ್ಸವಕ್ಕೆಂದು ಹೋಗಿದ್ದರು. ಈ ಸಂದರ್ಭದಲ್ಲಿ ಮನೆಯ ಬಾಗಿಲ ಬೀಗ ಮುರಿದು ಒಳನುಗ್ಗಿದ ಕಳ್ಳರು ಕಪಾಟು ತೆರೆದು ಚಿನ್ನಾಭರಣಗಳನ್ನು ಕಳವುಗೈದಿದ್ದಾರೆ. ಸಿಸಿ ಟಿವಿ ದೃಶ್ಯಗಳನ್ನು ಕೇಂದ್ರೀಕರಿಸಿ ನಡೆಸಿದ ತನಿಖೆಯಲ್ಲಿ ಕಳವು ನಡೆಸಿರುವುದು ಹಾಶಿಂ ಹಾಗೂ ಮನೋಜ್ ಆಗಿದ್ದಾನೆಂದು ತಿಳಿದುಬಂದಿದೆ. ಕಳ್ಳರು ವ್ಯಾಪಾರ ಸಂಸ್ಥೆಯ ಮುಂದೆ ನಡೆದು ಹೋಗುತ್ತಿರುವುದು ಹಾಗೂ ಬಳಿಕ ಬಸ್ನಲ್ಲಿ ಪ್ರಯಾಣಿಸುತ್ತಿರುವ ದೃಶ್ಯಗಳು ಲಭ್ಯವಾಗಿವೆ. ಆರೋಪಿಗಳು ಬೋವಿಕ್ಕಾನ ಭಾಗದಲ್ಲಿದ್ದಾರೆಂಬ ಮಾಹಿತಿಯ ಆಧಾರದಲ್ಲಿ ಪಟ್ಟಾಂಬಿ ಪೊಲೀಸರು ಇಲ್ಲಿಗೆ ತಲುಪಿದ್ದರು. ತಲೆಮರೆಸಿಕೊಂಡು ವಾಸಿಸುತ್ತಿದ್ದ ಮನೆಯಿಂದ ಈ ಇಬ್ಬರನ್ನು ಸೆರೆಹಿಡಿಯಲಾಗಿದೆ. ಬಳಿಕ ಕಾಶಿಂನ ಪೆರುಂಬದ ಮನೆಯಲ್ಲಿ ನಡೆಸಿದ ತಪಾಸಣೆಯಲ್ಲಿ 22 ಪವನ್ ಚಿನ್ನಾಭರಣ ಪತ್ತೆಯಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಕಳವಿನ ಬಳಿಕ ಶನಿವಾರವೇ ಆರೋಪಿಗಳು ಕಾಸರಗೋಡಿಗೆ ತಲುಪಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಚಿನ್ನ ಮಾರಾಟ ನಡೆಸಲು ಇವರು ತೀರ್ಮಾನಿಸಿದ್ದರು. ಆದರೆ ಆದಿತ್ಯವಾರ ಚಿನ್ನದಂಗಡಿಗಳು ತೆರೆಯದಿ ರುವುದರಿಂದ ಆರೋಪಿಗಳು ತಮ್ಮ ವಾಸಸ್ಥಳಕ್ಕೆ ಮರಳಿದ್ದರು. ಅದರ ಬೆನ್ನಲ್ಲೇ ಪೊಲೀಸರು ತಲುಪಿ ಇಬ್ಬರನ್ನು ಬಂಧಿಸಿದ್ದಾರೆ.







