28 ಪ್ರವಾಸಿಗರ ಹತ್ಯೆ : ಮಾಸ್ಟರ್ ಮೈಂಡ್ ಸೈಫುಲ್ಲಾ ಖಾಲೀದ್

ನವದೆಹಲಿ: ಪ್ರವಾಸಿಗರಿಗೆ ಶಾಂತಿಯುತ ವಿಶ್ರಾಂತಿ ಸ್ಥಳವೆಂದೇ ಪರಿಗಣಿಸಲಾದ  ಜಮ್ಮು-ಕಾಶ್ಮೀರದ ಪ್ರಕೃತಿ ರಮಣೀಯವಾದ ಬೈಸ್ತಾನ್ ಕಣಿವೆಯ ಪಹಲ್ಗಾಮ್‌ನಲ್ಲಿ ನಿನ್ನೆ ನಡೆದ ಭಯೋತ್ಪಾದಕ ದಾಳಿಯಲ್ಲಿ 28 ಮಂದಿ ಪ್ರವಾಸಿಗರನ್ನು  ದಾರುಣವಾಗಿ ಹತ್ಯೆಗೈದು ಹಲವು ಮಂದಿಯನ್ನು ಗಂಭೀರ ಗಾಯಗೊಳಿಸಿದ ಅತ್ಯಂತ ಹೇಯ ಕೃತ್ಯದ ಮಾಸ್ತರ್ ಮೈಂಡ್ ಪಾಕಿಸ್ತಾನದ ಲಷ್ಕರ್ ಎ ತೋಯ್ಬಾದ  ಉಪಸಂಘಟನೆಯಾದ ದಿ ರೆಸಿಸ್ಟೆನ್ಸ್ ಫ್ರೆಂಟ್‌ನ ಮುಖ್ಯಸ್ಥ ಸೈಫುಲ್ಲಾ ಖಾಲಿದ್ ಅಲಿಯಾಸ್ ಸೈಫುಲ್ಲ ಕಸೂರಿ ಆಗಿರುವುದಾಗಿ ತನಿಖೆಯಲ್ಲಿ ಸ್ಪಷ್ಟಗೊಂಡಿದೆ. ಈತ ಲಷ್ಕರ್ ಎ ತೋಯ್ಬಾದ  ಉಪಮುಖ್ಯಸ್ಥನೂ ಆಗಿದ್ದಾನೆ. ಈ ಭಯೋತ್ಪಾದಕ ಸಂಘಟನೆಯ ಸ್ಥಾಪಕ ಹಫೀಜ್  ಸಯೀದ್‌ನ ಆಪ್ತನೂ ಆಗಿದ್ದಾನೆ. ಭಾರತದಲ್ಲಿ ನಡೆದ ಹಲವು ಪ್ರಮುಖ ಭಯೋತ್ಪಾದಕ ದಾಳಿಯಲ್ಲಿ ಈತ ಭಾಗಿಯಾಗಿದ್ದಾನೆ. ಈತ ಯಾವಾಗಲೂ ಐಷಾರಾಮಿ ಕಾರುಗಳಲ್ಲಿ ಪ್ರಯಾಣಿಸುತ್ತಾನೆ. ಗುಪ್ತಚರ ಮೂಲಗಳ ಪ್ರಕಾರ ಸೈಫುಲ್ಲಾ ಪ್ರಸ್ತುತ ಜಮ್ಮು-ಕಾಶ್ಮೀರದಲ್ಲಿ ಲಷ್ಕರ್ ಮತ್ತು ಟಿ.ಆರ್.ಎಫ್ ನ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸುತ್ತಿದ್ದಾನೆ. ಈತನಿಗೆ ಶಸ್ತ್ರಸಜ್ಜಿತ ತರಬೇತಿ ಪಡೆದ ಭಯೋತ್ಪಾದಕರು ರಕ್ಷಣೆ ನೀಡುತ್ತಿದ್ದಾರೆ. ಪಾಕಿಸ್ತಾನ ಸೇನೆಯ ರಕ್ಷಣೆ ಮತ್ತು ಅಲ್ಲಿನ ಬೇಹುಗಾರಿಕಾ ಸಂಘಟನೆಯಾದ ಐಎಸ್‌ಐ ಬೆಂಬಲದೊಂದಿಗೆ ಪಾಕಿಸ್ತಾನದಲ್ಲಿ ಮುಕ್ತವಾಗಿ ಸಂಚರಿಸುತ್ತಾನೆ. ಗುಪ್ತಚರ ಮೂಲಗಳು ಬಹಿರಂಗಪಡಿಸುವ ಪ್ರಕಾರ ಪಾಕಿಸ್ತಾನ ಸೇನೆ ಅಲ್ಲಿನ ಕಂಗನ್‌ಪುರದಲ್ಲಿ ೨೦೨೫ ಫೆ. ೨ರಂದು  ನಡೆಸಿದ ಕಾರ್ಯಕ್ರಮ ದಲ್ಲಿ ಭಾಗವಹಿಸಿದ್ದ ಈತ ಆ ವೇದಿಕೆಯಲ್ಲಿ ಭಾರತದಲ್ಲಿ ಭಯೋತ್ಪಾದನೆ ಇನ್ನಷ್ಟು ತೀವ್ರ ಗೊಳಿಸುವುದಾಗಿಯೂ ಬಹಿರಂಗವಾಗಿ ಬೆದರಿಕೆಯೊಡ್ಡಿದ್ದನು. ಮಾತ್ರವಲ್ಲ  ಪಾಕಿಸ್ತಾನಿ ಸೇನೆಯ ಮತ್ತು ಐಎಸ್‌ಐ  ಸಹಾಯದಿಂದ ಭಾರತದ ಗಡಿಯುದ್ದಕ್ಕೂ ಭಯೋತ್ಪಾದಕರು ಒಳನುಸುಳುವ ಯೋಜನೆಯನ್ನು ಘೋಷಿಸಿದ್ದನು.

ಪಹಲ್ಗಾಮ್‌ನಲ್ಲಿ ನಿನ್ನೆ ನಡೆದ ಭಯೋತ್ಪಾದಕ ದಾಳಿಯಲ್ಲಿ ಮಡಿದವರಲ್ಲಿ ಕೊಚ್ಚಿ ಇಡವಳ್ಳಿ ಮಾಂಙಾಟ್ ರಸ್ತೆ ಬಳಿ ನಿವಾಸಿ ಎನ್. ರಾಮಚಂದ್ರನ್ (65), ಕೊಚ್ಚಿ ನೌಕಾಪಡೆಯ ಅಧಿಕಾರಿ ಹರಿಯಾಣ ನಿವಾಸಿ ವಿನಯ್ ನರ್ವಲ್ (26), ಕರ್ನಾಟಕ ಶಿವಮೊಗ್ಗದ ಮಂಜುನಾಥ್ ರಾವ್, ಬೆಂಗಳೂರಿನಲ್ಲಿ ನೆಲೆಸಿರುವ ಹಾವೇರಿ ರಾಣೆಬೆ ನ್ನೂರಿನ ಭರತ್ ಭೂಷಣ್  ಎಂಬವರೂ ಒಳಗೊಂಡಿದ್ದಾರೆ.  ಕಾಶ್ಮೀರ ಸಂದರ್ಶನಕ್ಕಾಗಿ ಕೇರಳ ಹೈಕೋರ್ಟ್‌ನ ನ್ಯಾಯಾಧೀಶರು ಗಳಾದ ಅನಿಲ್ ಕೆ. ನರೇಂದ್ರನ್, ಪಿ.ಜಿ. ಅಜಿತ್ ಕುಮಾರ್ ಮತ್ತು ಕೆ. ಗಿರೀಶ್ ಎಂಬವರು ಹೋಗಿದ್ದು ಇವರು ಅಲ್ಲಿ ಸುರಕ್ಷಿತರಾಗಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page