ಕಾರು ಢಿಕ್ಕಿ ಹೊಡೆದು ಮಹಿಳೆ ಸಾವು: ಆರೋಪಿ ಅಜ್ಮಲ್ ವಿರುದ್ಧ ಸ್ನೇಹಿತೆಯಿಂದ ದೂರು

ಕೊಲ್ಲಂ: ಸ್ಕೂಟರ್‌ಗೆ ಕಾರು ಢಿಕ್ಕಿ ಹೊಡೆದು ಮಹಿಳೆ ಸಾವಿಗೀಡಾದ ಪ್ರಕರಣದಲ್ಲಿ ಆರೋಪಿಯಾದ ಕರುನಾಗಪಳ್ಳಿ ವೆಳುತ್ತಮಣಲ್ ಎಂಬಲ್ಲಿನ ಅಜ್ಮಲ್  ಎಂಬಾತನ ವಿರುದ್ಧ ಆತನ ಜತೆಗೆ ಕಾರಿನಲ್ಲಿದ್ದ ಯುವ ವೈದ್ಯೆ ಶ್ರೀಕುಟ್ಟಿ ದೂರು ನೀಡಿದ್ದಾಳೆ. ಎರಡು ತಿಂಗಳ ಹಿಂದೆ ಕರುನಾಗಪಳ್ಳಿಯ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಹೋದ ಅಜ್ಮಲ್ ನೈಟ್ ಡ್ಯೂಟಿಯಲ್ಲಿದ್ದ ಡಾ| ಶ್ರೀಕುಟ್ಟಿಯನ್ನು ಪರಿಚಯಗೊಂಡಿದ್ದನೆನ್ನಲಾಗಿದೆ. ಪೊಲೀಸ್ ಅಧಿಕಾರಿಯೆಂದು ತಿಳಿಸಿ ಪರಿಚಯಗೊಂಡ ಅಜ್ಮಲ್ ಅನಂತರ ಸ್ನೇಹ ಬೆಳೆಸಿ ಚಿನ್ನಾಭರಣಗಳ ಹೊರತು ಎಂಟು ಲಕ್ಷ ರೂಪಾಯಿಗಳನ್ನು ಪಡೆದು ವಂಚಿಸಿದ್ದಾನೆಂದು ಶ್ರೀಕುಟ್ಟಿ ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾಳೆ. ಕಳೆದ ಆದಿತ್ಯವಾರ ಸಂಜೆ ಅಜ್ಮಲ್ ಹಾಗೂ ಶ್ರೀಕುಟ್ಟಿ ಸಂಚರಿಸುತ್ತಿದ್ದ ಕಾರು ಮೈನಾಗಪಳ್ಳಿ ಅನೂರ್ ಕಾವ್ ಎಂಬಲ್ಲಿ ಸ್ಕೂಟರ್‌ಗೆ ಢಿಕ್ಕಿ ಹೊಡೆದಿದ್ದು, ಆ ಅಪಘಾತದಲ್ಲಿ ಮಹಿಳೆಯೋರ್ವೆ ಮೃತಪಟ್ಟಿದ್ದರು. ಅಜ್ಮಲ್ ಹಾಗೂ ಶ್ರೀಕುಟ್ಟಿಯನ್ನು ಸೆರೆ ಬಿಡಿಯಲಾಗಿತ್ತು. ಬಳಿಕ ನಡೆಸಿದ ತನಿಖೆಯಲ್ಲಿ ಘಟನೆ ವೇಳೆ ಅಜ್ಮಲ್ ಹಾಗೂ ಶ್ರೀ ಕುಟ್ಟಿ ಮದ್ಯದ ಅಮಲಿನಲ್ಲಿದ್ದರೆಂದೂ ತಿಳಿದು ಬಂದಿತ್ತು.

Leave a Reply

Your email address will not be published. Required fields are marked *

You cannot copy content of this page