ಕಣ್ಣೂರು ಕಾರ್ಪರೇಶನ್, ಮಲಯಾಲಪುಳ, ಪಂ.ನಲ್ಲಿ ಇಂದು ಹರತಾಳ

ತಿರುವನಂತಪುರ: ಕಣ್ಣೂರಿನಲ್ಲಿ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾದ ಎಡಿಎಂ ನವೀನ್ ಬಾಬು ಅವರ ಮೃತದೇಹವನ್ನು ಇಂದು ಊರಿಗೆ ತಲುಪಿಸಲಾಗುವುದು. ಅಂತ್ಯ ಸಂಸ್ಕಾರ ನಾಳೆ ನಡೆಯಲಿರುವುದು.

ಪರಿಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಮೃತದೇಹವನ್ನು ನಿನ್ನೆ ರಾತ್ರಿ 12.30ರ ವೇಳೆ ಸಂಬಂಧಿಕರಿಗೆ ಬಿಟ್ಟುಕೊಡಲಾಯಿತು. ಕಾಸರಗೋಡು, ಕಣ್ಣೂರು ಜಿಲ್ಲಾಧಿಕಾರಿಗಳ ಸಹಿತ ವಿವಿಧ ರಾಜಕೀಯ ನೇತಾರರು ಆಸ್ಪತ್ರೆಗೆ ತಲುಪಿ ಮೃತದೇಹಕ್ಕೆ ಅಂತಿಮ ನಮನ ಸಲ್ಲಿಸಿದರು. ಇಂದು ಮಧ್ಯಾಹ್ನ ವೇಳೆ ಪತ್ತನಂತಿಟ್ಟಕ್ಕೆ ತಲುಪಿಸುವ ಮೃತದೇಹವನ್ನು ಶವಾಗಾರದಲ್ಲಿರಿಸಲಾಗುವುದು. ನಾಳೆ ಪತ್ತನಂತಿಟ್ಟ ಕಲೆಕ್ಟರೇಟ್‌ನಲ್ಲಿ  ಸಾರ್ವಜನಿಕ ದರ್ಶನಕ್ಕಿರಿಸಿದ ಬಳಿಕ ಮನೆ ಹಿತ್ತಿಲಲ್ಲಿ ಅಂತ್ಯ ಸಂಸ್ಕಾರ ನಡೆಯಲಿದೆ.

ಇದೇ ವೇಳೆ ಮಲಯಾಲಪುಳ ಪಂಚಾಯತ್‌ನಲ್ಲಿ ಕಾಂಗ್ರೆಸ್, ಬಿಜೆಪಿ, ಕಣ್ಣೂರಿನಲ್ಲಿ ಬಿಜೆಪಿ ಕರೆ ನೀಡಿದ ಹರತಾಳ ಮುಂದುವರಿಯುತ್ತಿದೆ. ಕಣ್ಣೂರು ಕಾರ್ಪರೇಶನ್ ವ್ಯಾಪ್ತಿಯಲ್ಲಿ ಸಂಜೆ 6 ಗಂಟೆವರೆಗೆ ಹರತಾಳ ನಡೆಯಲಿದೆ.

Leave a Reply

Your email address will not be published. Required fields are marked *

You cannot copy content of this page