ಕುಂಬಳೆಯ ಟೋಲ್ಗೇಟ್: ಸಿಪಿಐ ವಿರೋಧ
ಕುಂಬಳೆ: ಕೇವಲ 18 ಕಿಲೋ ಮೀಟರ್ ಅಂತರದಲ್ಲಿ ಟೋಲ್ ಗೇಟ್ ನಿರ್ಮಿಸುವುದು ಅವೈಜ್ಞಾನಿಕ ಹಾಗೂ ಕೇಂದ್ರ ಸರಕಾರದ ಆದೇಶದ ಸ್ಪಷ್ಟ ಉಲ್ಲಂಘನೆ ಎಂದು ಸಿಪಿಐ ತಿಳಿಸಿದೆ. ಕುಂಬಳೆಯಲ್ಲಿ ಟೋಲ್ ಗೇಟ್ ನಿರ್ಮಾಣ ಯತ್ನವನ್ನು ಸಿಪಿಐ ಮಂಜೇಶ್ವರ ಮಂಡಲ ಸಮ್ಮೇಳನ ಖಂಡಿಸಿದೆ. 60 ಕಿಲೋ ಮೀಟರ್ ಅಂತರದಲ್ಲಿ ಟೋಲ್ ಗೇಟ್ ಇರಬೇಕೆಂಬ ಕೇಂದ್ರ ಸಚಿವ ನಿತಿನ್ ಗಡ್ಕರಿಯವರ ಆದೇಶವನ್ನು ಉಲ್ಲಂಘಿಸಿ ಕುಂಬಳೆಯಲ್ಲಿ ಟೋಲ್ ಗೇಟ್ ನಿರ್ಮಿಸುತ್ತಿರುವುದು ಜನತೆಯ ಮುಗ್ದತೆಯ ಮೇಲೆ ನಡೆಸುವ ಸವಾರಿ ಎಂದು ಸಿಪಿಐ ದೂರಿದೆ.
ಪೈವಳಿಕೆ ಪಂ.ನ ಗಡಿ ಪ್ರದೇಶದಿಂದ ಇತರ ರಾಜ್ಯಗಳಿಗೆ ಅಕ್ರಮವಾಗಿ ಮಣ್ಣು ಸಾಗಿಸುವ ಮೂಲಕ ಪ್ರಕೃತಿ ನಾಶವಾಗು ತ್ತಿದ್ದು, ಅಕ್ರಮ ಗಣಿಗಾರಿಕೆಯನ್ನು ತಕ್ಷಣ ನಿಲ್ಲಿಸಬೇಕೆಂದು ಸಿಪಿಐ ಒತ್ತಾಯಿಸಿದೆ. ಜಿಲ್ಲೆಯ ಸರಕಾರಿ ಕಚೇರಿಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಗೊಳಿಸಬೇಕೆಂದು, ಮಂಜೇಶ್ವರ ತಾಲೂಕಿನಾದ್ಯಂತ ಪಂಚಾಯತ್, ಕಂದಾಯ, ಆರೋಗ್ಯ, ವಿದ್ಯುತ್, ಕೃಷಿ ಇಲಾಖೆಗಳಲ್ಲಿದ್ದವರು ಇತರ ಜಿಲ್ಲೆಗಳಿಗೆ ವರ್ಗಾವಣೆಗೊಂಡಾಗ ನೌಕರರ ಕೊರತೆಯಿಂದ ಕಚೇರಿ ಕೆಲಸ ಮೊಟಕಾಗುವುದನ್ನು ತಪ್ಪಿಸಬೇಕೆಂದು ಸಮ್ಮೇಳನದಲ್ಲಿ ಸರಕಾರವನ್ನು ಒತ್ತಾಯಿಸಲಾಗಿದೆ.