ಮದ್ಯದಮಲಿನಲ್ಲಿ ಹೊಡೆದಾಟ: ಚದುರಿಸಲೆತ್ನಿಸಿದ ಪೊಲೀಸರ ಮೇಲೆ ಹಲ್ಲೆ ; ಇಬ್ಬರ ಬಂಧನ
ಸೀತಾಂಗೋಳಿ: ಮದ್ಯದ ಮಲಿನಲ್ಲಿ ಇಬ್ಬರು ವ್ಯಕ್ತಿಗಳು ಮದ್ಯದಂಗಡಿ ಮುಂದೆ ಹೊಡೆದಾಡಿಕೊಂಡಿದ್ದು, ಈ ವೇಳೆ ಅವರನ್ನು ಚದುರಿಸಲು ಯತ್ನಿಸಿದ ಪೊಲೀಸರ ಮೇಲೆ ಆ ಇಬ್ಬರು ಹಲ್ಲೆಗೈದ ಘಟನೆ ನಿನ್ನೆ ಸಂಜೆ ಸೀತಾಂಗೋಳಿಯಲ್ಲಿ ನಡೆದಿದೆ. ಈ ಸಂಬಂಧ ಸೂರಂಬೈಲು ನಿವಾಸಿ ಋತಿಕ್ ಎಸ್ (25) ಹಾಗೂ ಬೇಳ ಪೆರಿಯಡ್ಕದ ಹರೀಶ ಪಾಟಾಳಿ (43) ಎಂಬಿವರನ್ನು ಕುಂಬಳೆ ಪೊಲೀಸರು ಬಂಧಿಸಿದ್ದಾರೆ. ನಿನ್ನೆ ಸಂಜೆ ಈ ಇಬ್ಬರು ಸೀತಾಂಗೋಳಿಯ ಬಿವರೇಜಸ್ನ ಮದ್ಯದಂಗಡಿ ಮುಂದೆ ಮದ್ಯದಮಲಿನಲ್ಲಿ ಪರಸ್ಪರ ಹೊಡೆದಾಡಿಕೊಂಡಿದ್ದಾರೆನ್ನಲಾಗಿದೆ. ಈ ವಿಷಯ ತಿಳಿದು ಅಲ್ಲಿಗೆ ತಲುಪಿದ ಸೀತಾಂಗೋಳಿ ಪೊಲೀಸ್ ಸಹಾಯ ಕೇಂದ್ರದ ಪೊಲೀಸರು ಅವರಿಬ್ಬರನ್ನು ಚದುರಿಸಲು ಯತ್ನಿಸಿದಾಗ ಅವರು ಪೊಲೀಸರ ಮೇಲೆ ತಿರುಗಿಬಿದ್ದಿದ್ದಾರೆಂದು ದೂರಲಾಗಿದೆ. ಈ ಬಗ್ಗೆ ತಿಳಿದ ಕುಂಬಳೆ ಎಸ್ಐ ಶ್ರೀಜೇಶ್ ನೇತೃತ್ವದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರು ಅಲ್ಲಿಗೆ ತೆರಳಿ ಆ ಇಬ್ಬರನ್ನು ಬಂಧಿಸಿದ್ದಾರೆ. ಬಳಿಕ ಸಿಪಿಒ ಮೊಹಮ್ಮದ್ ಫಹದ್ ನೀಡಿದ ದೂರಿನಂತೆ ಆರೋಪಿಗಳ ವಿರುದ್ದ ಕೇಸು ದಾಖಲಿಸಲಾಗಿದೆ. ಆರೋಪಿಗಳನ್ನು ನ್ಯಾಯಾಲಯದಲ್ಲಿ ಹಾಜರುಪಡಿಸಿದ್ದು ಈ ವೇಳೆ ಅವರಿಗೆ ರಿಮಾಂಡ್ ವಿಧಿಸಲಾಗಿದೆ.