ಉಯ್ಯಾಲೆಯಾಟವಾಡುತ್ತಿದ್ದ ವೇಳೆ ಕುಣಿಕೆ ಕುತ್ತಿಗೆಗೆ ಸಿಲುಕಿ ಬಾಲಕ ಸಾವು
ಕಾಸರಗೋಡು: ಕ್ವಾರ್ಟರ್ಸ್ ನೊಳಗೆ ಉಯ್ಯಾಲೆಯಾಡುತ್ತಿದ್ದ ವೇಳೆ ಅದರ ಕುಣಿಕೆ ಅಕಸ್ಮಾತ್ ಕುತ್ತಿಗೆಗೆ ಸಿಲುಕಿ ಬಾಲಕ ಧಾರುಣವಾಗಿ ಸಾವನ್ನಪ್ಪಿದ ಘಟನೆ ನಡೆದಿದೆ.
ಮೂಲತಃ ಆಂಧ್ರಪ್ರದೇಶ ಚಿತ್ತೂರು ಜಿಲ್ಲೆಯ ಪಾಕಲ ತಾಲೂಕಿನ ಧಮಲಚೆರುವು ಇಂದಿರಾನಗರ ನಿವಾಸಿ ಹಾಗೂ ಈಗ ಚೆಂಗಳಕ್ಕೆ ಸಮೀಪದ ನಾಲ್ಕನೇ ಮೈಲಿನ ಕ್ವಾರ್ಟರ್ಸ್ವೊಂದರಲ್ಲಿ ವಾಸಿಸುತ್ತಿರುವ ಸೈಯದ್ ಮಸ್ತಾನ್- ನಸ್ರೀನ್ ದಂಪತಿ ಪುತ್ರ ಉಮ್ಮರ್ ಫಾರೂಕ್ (12) ಸಾವನ್ನಪ್ಪಿದ ಬಾಲಕ.
ಈತ ನಿನ್ನೆ ಮಧ್ಯಾಹ್ನ ಕ್ವಾರ್ಟ ರ್ಸ್ನ ಒಳಗೆ ಮೇಲಿನ ಅಡ್ಡಕ್ಕೆ ಸೀರೆ ಕಟ್ಟಿ ಉಯ್ಯಾಲೆ ಆಟವಾಡತೊಡಗಿ ದ್ದನು. ಆಗ ಆತನ ಇಬ್ಬರು ಸಹೋದರಿಯರಾದ ತಸ್ಲಿಂ ಶಬ್ಸಮ್ ಮತ್ತು ಮೆಹ್ತಾಬ್ ಕ್ವಾರ್ಟರ್ಸ್ನ ಹೊರಗೆ ಆಟವಾಡುತ್ತಿದ್ದರು. ಉಯ್ಯಾಲೆ ಆಟದಲ್ಲಿ ತೊಡಗಿದಾಗ ಅದರ ಕುಣಿಕೆ ಉಮ್ಮರ್ ಫಾರೂಕ್ನ ಕುತ್ತಿಗೆಗೆ ಸಿಲುಕಿ ಕೊಂಡಿತು. ಅದನ್ನು ಕಂಡ ಮನೆಯವರು ತಕ್ಷಣ ಕುಣಿಕೆ ಬಿಡಿಸಿ ಆತನನ್ನು ಆಸ್ಪತ್ರೆಗೆ ಸಾಗಿಸಿದರೂ, ಪ್ರಾಣ ಉಳಿಸಲು ಸಾಧ್ಯವಾಗಲಿಲ್ಲ. ವಿದ್ಯಾನಗರ ಪೊಲೀಸರು ಮೃತದೇಹದ ಮಹಜರು ನಡೆಸಿ ತನಿಖೆ ಆರಂಭಿಸಿದ್ದಾರೆ.
ಮೃತದೇಹವನ್ನು ಇಂದು ಜನರಲ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೊಳಪಡಿಸ ಲಾಯಿತು. ಮೃತನ ಹೆತ್ತವರು ಮೂರು ವರ್ಷಗಳ ಹಿಂದೆ ಆಂಧ್ರಪ್ರದೇಶದಿಂದ ಕೇರಳಕ್ಕೆ ಆಗಮಿಸಿದ್ದರು. ಬಡಗಿ ಕಾರ್ಮಿಕನಾಗಿರುವ ಬಾಲಕನ ತಂದೆ ಸೈಯದ್ ಮುಸ್ತಾನ್ ಆರು ತಿಂಗಳ ಹಿಂದೆಯಷ್ಟೇ ತಮ್ಮ ಕುಟುಂಬದ ವರೊಂದಿಗೆ ಕಾಸರಗೋಡಿಗೆ ಬಂದು ನಾಲ್ಕನೇ ಮೈಲಿನ ಕ್ವಾರ್ಟರ್ಸ್ನಲ್ಲಿ ವಾಸಿಸತೊಡಗಿದ್ದಾರೆ.