ಭಯೋತ್ಪಾದಕ ದಾಳಿ ಬಗ್ಗೆ ಮುನ್ನೆಚ್ಚರಿಕೆ: ಮುಂಬೈಯಲ್ಲಿ ಜ. ೧೮ರ ತನಕ ನಿಷೇಧಾಜ್ಞೆ
ಮುಂಬೈ: ಮುಂಬೈಯಲ್ಲಿ ವಿದೇಶ ಭಯೋತ್ಪಾದಕರು ದಾಳಿ ನಡೆಸುವ ಸಾಧ್ಯತೆ ಇದೆಯೆಂದು ಕೇಂದ್ರ ಗುಪ್ತಚರ ಸಂಸ್ಥೆಗಳು ಮುನ್ನೆ ಚ್ಚರಿಕೆ ನೀಡಿದ್ದು, ಆ ಹಿನ್ನೆಲೆಯಲ್ಲಿ ಮುಂಬೈ ನಗರ ಮತ್ತು ಪರಿಸರ ಪ್ರದೇಶಗಳಲ್ಲಿ ಜನವರಿ ೧೮ರ ತನಕ ಪೊಲೀಸರು ನಿಷೇಧಾಜ್ಞೆ ಜ್ಯಾರಿಗೊಳಿಸಿದ್ದಾರೆ.
ಕ್ರಿಸ್ಮಸ್ ಮತ್ತು ಹೊಸ ವರ್ಷಾಚರಣೆಯ ಹಿನ್ನೆಲೆಯಲ್ಲಿ ಮುಂಬೈಯಲ್ಲಿ ವಿಶೇಷ ಜಾಗ್ರತಾ ನಿರ್ದೇಶ ನೀಡಲಾಗಿದೆ. ನಿಷೇಧಾಜ್ಞೆ ಪ್ರಕಾರ ಸಾರ್ವಜನಿಕ ಸ್ಥಳಗಳಲ್ಲಿ ನಾಲ್ಕಕ್ಕಿಂತ ಹೆಚ್ಚು ಮಂದಿ ಗುಂಪು ಸೇರುವುದನ್ನು ತಡೆಯಲಾಗಿದೆ.
ಭಯೋತ್ಪಾದಕರು ಡ್ರೋನ್ಗಳು, ರಿಮೋಟ್ ನಿಯಂತ್ರಿತ ಮೈಕ್ರೋ ಲೈಟ್ ಏರ್ ಕ್ರಾಫ್ಟ್ಗಳು, ಪಾರಾಗ್ಲೈಡರ್ಗಳನ್ನು ಬಳಸಿ ದಾಳಿ ನಡೆಸುವ ಸಾಧ್ಯತೆ ಇದೆಯೆಂದು ಗುಪ್ತಚರ ವಿಭಾಗ ಮಾಹಿತಿ ನೀಡಿದೆ. ಇದರಂತೆ ಡ್ರೋನ್ಗಳು, ರಿಮೋಟ್ ನಿಯಂತ್ರಿತ ಮೈಕ್ರೋ ಲೈಟ್ ಏರ್ ಕ್ರಾಫ್ಟ್ಗಳು, ಪಾರಾಗ್ಲೈಡರ್ಗಳು, ಪಾರಾ ಮೋಟಾರ್ಗಳು, ಹ್ಯಾಂಡ್ ಗ್ಲೈಡರ್ಗಳು, ಹೋಟ್ ಏರ್ ಬಲೂನ್ ಇತ್ಯಾದಿಗಳು ಬಳಸಲು ಮುಂಬೈ ಉಪ ಪೊಲೀಸ್ ಆಯುಕ್ತರಿಂದ ಮುಂಗಡ ಲಿಖಿತ ಅನುಮತಿ ಪಡೆದಿರಬೇಕೆಂದು ಪೊಲೀಸ್ ಇಲಾಖೆ ಸ್ಪಷ್ಟಪಡಿಸಿದೆ.