ಸೀತಾಂಗೋಳಿ: ಕೆಂಪುಕಲ್ಲು ಸಾಗಾಟದ ಲಾರಿ ಹಾಗೂ ಬೈಕ್ ಢಿಕ್ಕಿ ಹೊಡೆದು ವ್ಯಾಪಾರಿ ಸಹಿತ ಇಬ್ಬರು ಗಂಭೀರ ಗಾಯಗೊಂಡ ಘಟನೆ ಸಂಭವಿಸಿದೆ.
ಮಾನ್ಯ ನಿವಾಸಿಯೂ ನೀರ್ಚಾಲು ಮೇಲಿನ ಪೇಟೆಯಲ್ಲಿ ಫ್ಯಾನ್ಸಿ ಅಂಗಡಿ ನಡೆಸುವ ಪಚ್ಚು ಯಾನೆ ಪ್ರಕಾಶ್ (36), ಚೆಡೇಕಲ್ ನಿವಾಸಿಯೂ ನೀರ್ಚಾಲಿನಲ್ಲಿ ಬಾಡಿಗೆ ಕ್ವಾರ್ಟರ್ಸ್ನಲ್ಲಿ ವಾಸಿಸುವ ರತೀಶ್ (32) ಎಂಬವರು ಗಾಯಗೊಂಡಿದ್ದಾರೆ. ಇವರನ್ನು ದೇರಳಕಟ್ಟೆಯ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ನಿನ್ನೆ ಸಂಜೆ 5 ಗಂಟೆ ವೇಳೆ ಸೀತಾಂಗೋಳಿ ಪೆಟ್ರೋಲ್ ಬಂಕ್ ಸಮೀಪದ ರಸ್ತೆಯಲ್ಲಿ ಅಪಘಾತ ಸಂಭವಿಸಿದೆ. ಪ್ರಕಾಶ್ ಹಾಗೂ ರತೀಶ್ ಬೈಕ್ನಲ್ಲಿ ಸೀತಾಂಗೋಳಿಯಿಂದ ನೀರ್ಚಾಲಿನತ್ತ ತೆರಳುತ್ತಿದ್ದಾಗ ಬೇಳ ದಿಂದ ಸೀತಾಂಗೋಳಿ ಭಾಗಕ್ಕೆ ಕೆಂಪು ಕಲ್ಲು ಸಾಗಿಸುತ್ತಿದ್ದ ಲಾರಿ ಮಧ್ಯೆ ಅಪಘಾತವುಂಟಾಗಿದೆ. ಕೂಡಲೇ ಸ್ಥಳೀಯರು ಸೇರಿ ಗಾಯಾಳುಗಳನ್ನು ಮೊದಲು ಕುಂಬಳೆಯ ಆಸ್ಪತ್ರೆಗೂ ಬಳಿಕ ದೇರಳಕಟ್ಟೆಯ ಆಸ್ಪತ್ರೆಗೆ ಕೊಂಡೊಯ್ದು ದಾಖಲಿಸಲಾಗಿದೆ.