ಕಾಸರಗೋಡು: ಪಿಣರಾಯಿ ವಿಜಯನ್ ನೇತೃತ್ವದ ಎಡರಂಗ ಸರಕಾರದ ಪೊಲೀಸರ ದೌರ್ಜನ್ಯ ನೀತಿ ಅನುಸರಿಸುತ್ತಿದ್ದಾರೆಂದು ಆರೋಪಿಸಿ ಹಾಗೂ ಅಂತಹ ನೀತಿಯನ್ನು ಪ್ರತಿಭಟಿಸಿ ಹಾಗೂ ಅಭಿವೃದ್ಧಿಯುತ ಕೇರಳಕ್ಕಾಗಿ ಪೊಲೀಸ್ ಪಡೆಯಲ್ಲಿ ಸಮಗ್ರ ಬದಲಾವಣೆ ತರಬೇಕೆಂದು ಆಗ್ರಹಿಸಿ ಬಿಜೆಪಿಯ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಇಂದು ಬೆಳಿಗ್ಗೆ ಜಿಲ್ಲಾ ವರಿಷ್ಠ ಪೊಲೀಸ್ ಅಧಿಕಾರಿ ಕಚೇರಿಗೆ ಮಾರ್ಚ್ ನಡೆಸಲಾಯಿತು.
ವಿದ್ಯಾನಗರದ ಕೇಂದ್ರೀಯ ವಿದ್ಯಾಲಯ ಪರಿಸರದಿಂದ ಆರಂಭ ಗೊಂಡ ಮಾರ್ಚ್ನಲ್ಲಿ ನೂರಾರು ಮಂದಿ ಕಾರ್ಯಕರ್ತರು ಭಾಗವಹಿಸಿ ದರು. ಪಕ್ಷದ ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ, ಪಿ.ಆರ್. ಸುನಿಲ್, ಎಂ. ಮಧು, ಕರ್ಷಕ ಮೋರ್ಛಾ ಜಿಲ್ಲಾಧ್ಯಕ್ಷ ಸುಕುಮಾರನ್ ಕಾಲಿಕಡವು ಮೊದಲಾದವರು ನೇತೃತ್ವ ನೀಡಿದರು. ಮಾರ್ಚ್ನ್ನು ಎಸ್ಪಿ ಕಚೇರಿ ರಸ್ತೆಬಳಿಯಿಂದ ಪೊಲೀಸರು ಬಾರಿಕೇಡ್ ನಿರ್ಮಿಸಿ ತಡೆದರು. ಬಿಜೆಪಿ ರಾಜ್ಯ ಕಾರ್ಯದರ್ಶಿ ಕೆ. ರಂಜಿತ್ ಮಾರ್ಚ್ ಉದ್ಘಾಟಿಸಿದರು. ಹಲವರು ಮಾತನಾಡಿದರು.







