ಉಪ್ಪಳ: ಬೀದಿ ನಾಯಿಗಳ ಉಪಟಳದಿಂದ ಪಾದಚಾರಿಗಳಲ್ಲಿ ಭೀತಿ ಸೃಷ್ಟಿಯಾಗಿದೆ. ಉಪ್ಪಳ, ಹೊಸಂಗಡಿ ಪೇಟೆ, ಸೋಂಕಾಲು, ಬೇಕೂರು ಸಹಿತ ಒಳಪ್ರದೇಶಗ ಳಲ್ಲಿಯೂ ಬೀದಿ ನಾಯಿಗಳು ಹೆಚ್ಚಾಗಿದ್ದು, ಇದರಿಂದ ನಡೆದು ಹೋಗುವವರಿಗೆ ಭೀತಿ ಉಂಟಾಗಿದೆ. ಗುಂಪು ಗುಂಪಾಗಿ ಪರಸ್ಪರ ಕಚ್ಚಾಡಿ ನಡೆದು ಹೋಗುವ ಜನರನ್ನು ಹಾಗೂ ದ್ವಿಚಕ್ರ ವಾಹನ ಸವಾರರನ್ನು ಬೀದಿ ನಾಯಿಗಳು ಬೆನ್ನಟ್ಟುತ್ತಿರುವುದು ವ್ಯಾಪಕಗೊಂಡಿರುವುದಾಗಿ ದೂರಲಾಗಿದೆ. ಶಾಲಾ ಮಕ್ಕಳಲ್ಲಿ ಆತಂಕ ಹೆಚ್ಚಿದೆ. ಅಲ್ಲದೆ ರಸ್ತೆಯಲ್ಲಿ ವಾಹನಗಳ ಎದುರಿನಿಂದ ಅಡ್ಡದಿಡ್ಡಿಯಾಗಿ ಅಲೆದಾಡುತ್ತಿರುವುದರಿಂದ ಅಪಘಾತಕ್ಕೂ ಕಾರಣವಾಗುತ್ತಿದೆ. ಇತ್ತೀಚೆಗೆ ವರ್ಕಾಡಿ ಪುರುಷಂಗೋಡಿಯಲ್ಲಿ ಬಾಲಕನಿಗೆ, ಕಡಂಬಾರ್ ಪರಿಸರದ ಮಹಿಳೆಗೆ ನಾಯಿ ಕಡಿದು ಗಾಯಗೊಳಿಸಿತ್ತು. ಅಲೆಮಾರಿ ನಾಯಿಗಳ ಬಗ್ಗೆ ಪಂಚಾಯತ್ ಅಧಿಕಾರಿಗಳು ಕ್ರಮಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
