ಕಾಸರಗೋಡು: ಪರವನಡ್ಕ ತಲಕ್ಲಾಯಿ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ನಡೆದ ಕಳವಿಗೆ ಸಂಬಂಧಿಸಿ ಬೆರಳಚ್ಚು ತಜ್ಞರು ನಡೆಸಿದ ಪರಿಶೀಲನೆಯಲ್ಲಿ ಅಲ್ಲಿಂದ ಹಲವು ಬೆರಳಚ್ಚುಗಳನ್ನು ಪತ್ತೆಹಚ್ಚಿದ್ದಾರೆ. ಶನಿವಾರದಂದು ರಾತ್ರಿ ಈ ದೇಗುಲದಲ್ಲಿ ಕಳವು ನಡೆದಿದೆ. ಅರ್ಚಕರು ನಿನ್ನೆ ಬೆಳಿಗ್ಗೆ ದೇವಸ್ಥಾನಕ್ಕೆ ಆಗಮಿಸಿದಾಗಲಷ್ಟೇ ಕಳವು ನಡೆದ ವಿಷಯ ಗಮನಕ್ಕೆ ಬಂದಿದೆ. ಈ ಬಗ್ಗೆ ಕ್ಷೇತ್ರದ ಉಪಾಧ್ಯಕ್ಷ ಕೆ. ಆನಂದ್ ನೀಡಿದ ದೂರಿನಂತೆ ಮೇಲ್ಪರಂಬ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ವಿಷಯ ತಿಳಿದ ಊರವರೂ ಭಾರೀ ಸಂಖ್ಯೆಯಲ್ಲಿ ದೇವಸ್ಥಾನಕ್ಕೆ ಆಗಮಿಸಿದರು.
ಕ್ಷೇತ್ರದ ಗರ್ಭಗುಡಿಯ ಹಾಗೂ ಕಚೇರಿಯ ಬಾಗಿಲುಗಳನ್ನು ಕಳ್ಳರು ಒಡೆದಿದ್ದಾರೆ. ಕಚೇರಿಯೊಳಗಿದ್ದ ಎರಡು ಕಪಾಟುಗಳನ್ನು ಒಡೆದು ಅದರೊಳಗಿದ್ದ 25೦೦೦ ರೂ. ಮೌಲ್ಯದ ಎರಡು ಚಿನ್ನದ ಮುದ್ರೆ ಬಳೆ, 15,೦೦೦ ರೂ. ಮೌಲ್ಯದ ಹತ್ತು ಬೆಳ್ಳಿಯ ಮುದ್ರೆಬಳೆ, 15೦೦೦ ರೂ. ಮೌಲ್ಯದ ಬೆಳ್ಳಿಯ ನಾಗ ಪ್ರತಿಮೆಗಳು, 25೦೦೦ ರೂ. ನಗದು, ಗಣಪತಿ ದೇವರ ಎದುರುಗಡೆ ಇದ್ದ ಕಾಣಿಕೆ ಡಬ್ಬಿ, ಶ್ರೀ ಕ್ಷೇತ್ರದ ಆವರಣಗೋಡೆಯ ಹೊರಗಿದ್ದ ಶ್ರೀ ರಕ್ತೇಶ್ವರಿ ಮತ್ತು ಗುಳಿಗನ ಕಾಣಿಕೆ ಡಬ್ಬಿಗಳನ್ನೂ ಒಡೆದು ಹಾಕಿದ್ದಾರೆ.







