ಕುಂಬಳೆ: ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಮಿನಿ ಟೆಂಪೋದಲ್ಲಿ ತಂದು ಜನವಾಸ ಪ್ರದೇಶದಲ್ಲಿ ಉಪೇಕ್ಷಿಸಲೆತ್ನಿಸಿದ ವೇಳೆ ನಾಗರಿಕರನ್ನು ಕಂಡು ವಾಹನ ಉಪೇಕ್ಷಿಸಿ ಪರಾರಿಯಾದ ಇಬ್ಬರಿಗಾಗಿ ಕುಂಬಳೆ ಪೊಲೀಸರು ಶೋಧ ನಡೆಸಿದ್ದಾರೆ.
ಪುತ್ತಿಗೆ ಪಂಚಾಯತ್ನ ಜನವಾಸ ಪ್ರದೇಶವಾದ ಪೇರಾಲ್ ಕಣ್ಣೂರು ಸಿದ್ದಿಬಯಲಿನಲ್ಲಿ ಕೆಂಪು ಕಲ್ಲು ಕಡಿದು ತೆಗೆದು ಸೃಷ್ಟಿಯಾದ ಹೊಂಡದಲ್ಲಿ ಉಪೇಕ್ಷಿಸಲೆಂದು ನಿನ್ನೆ ಮುಂಜಾನೆ ಮಿನಿ ಟೆಂಪೋದಲ್ಲಿ ಭಾರೀ ಪ್ರಮಾಣದಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ತರಲಾಗಿತ್ತು. ಇದನ್ನರಿತ ನಾಗರಿಕರು ಒಗ್ಗೂಡಿ ಅಲ್ಲಿಗೆ ತಲುಪಿದಾಗ ವಾಹನದಲ್ಲಿದ್ದ ಇಬ್ಬರು ಓಡಿ ಪರಾರಿಯಾಗಿದ್ದಾರೆ. ಈ ಬಗ್ಗೆ ನಾಗರಿಕರು ನೀಡಿದ ದೂರಿನಂತೆ ಕುಂಬಳೆ ಎಸ್ಐ ಕೆ. ಶ್ರೀಜೇಶ್ ನೇತೃತ್ವದಲ್ಲಿ ತಲುಪಿದ ಪೊಲೀಸರು ಮಿನಿ ಟೆಂಪೋ ಹಾಗೂ ಅದರಲ್ಲಿದ್ದ ಪ್ಲಾಸ್ಟಿಕ್ ತ್ಯಾಜ್ಯವನ್ನು ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ವಶಪಡಿ ಸಿಕೊಂಡ ವಾಹನದ ಮಾಲಕನ ಕುರಿತು ಮಾಹಿತಿ ಲಭ್ಯವಾಗಿದ್ದು, ಆತನನ್ನು ತನಿಖೆಗೊಳಪಡಿಸಿ ಪರಾರಿಯಾದವರ ಮಾಹಿತಿ ಸಂಗ್ರಹಿಸಿ ಅವರನ್ನು ಸೆರೆಹಿಡಿಯಲು ಪೊಲೀಸರು ಕ್ರಮ ಕೈಗೊಂಡಿದ್ದಾರೆ.
ಕಾನೂನು ರೀತಿಯಲ್ಲೂ, ಕಾನೂನು ವಿರುದ್ದವಾಗಿಯೂ ಸಿದ್ಧಿಬಯಲು ಹಾಗೂ ಪೇರಾಲ್ ಕಣ್ಣೂರು, ಪರಿಸರ ಪ್ರದೇಶಗಳಲ್ಲಿ ವ್ಯಾಪಕವಾಗಿ ಕೆಂಪು ಕಲ್ಲಿನ ಕ್ವಾರೆಗಳು ಕಾರ್ಯಾಚರಿಸುತ್ತಿವೆ. ಕಲ್ಲುಗಳನ್ನು ಮಾರಾಟಗೈದು ಬಳಿಕ ಹೊಂಡಗಳನ್ನು ಹಾಗೆಯೇ ಉಪೇಕ್ಷಿಸಿ ತಂಡ ಮರಳುತ್ತಿದೆ. ನಾಗರಿಕರಿಗೆ ಭಾರೀ ಭೀತಿ ಹುಟ್ಟಿಸುವ ಇಂತಹ ಹೊಂಡಗಳಲ್ಲಿ ಪ್ಲಾಸ್ಟಿಕ್ ತ್ಯಾಜ್ಯವನ್ನು ಉಪೇಕ್ಷಿಸಲಾಗುತ್ತಿದೆ. ಪ್ರಕೃತಿಗೆ ಭಾರೀ ದುಷ್ಪರಿಣಾಮ ಬೀರುವ ಈ ಕೃತ್ಯ ಇತ್ತೀಚೆಗಿನಿಂದ ತೀವ್ರಗೊಂಡಿದೆ. ಇದನ್ನರಿತ ನಾಗರಿಕರು ಪ್ಲಾಸ್ಟಿಕ್ ತ್ಯಾಜ್ಯ ಉಪೇಕ್ಷಿಸುವವರನ್ನು ಪತ್ತೆಹಚ್ಚಿ ಸೆರೆಹಿಡಿಯಲು ಕಾದು ನಿಂತಿದ್ದರು. ಇದೇ ಸಂದರ್ಭದಲ್ಲಿ ನಿನ್ನೆ ಮುಂಜಾನೆ ತ್ಯಾಜ್ಯ ಹೇರಿದ ವಾಹನ ತಲುಪಿ ತ್ಯಾಜ್ಯವನ್ನು ಹೊಂಡದಲ್ಲಿ ಉಪೇಕ್ಷಿಸಲು ಯತ್ನಿಸಿದಾಗ ನಾಗರಿಕರು ಅಲ್ಲ್ಲಿಗೆ ತಲುಪಿ ದ್ದರು.ನಾಗರಿಕರನ್ನು ಕಂಡೊಡನೆ ವಾಹನದಲ್ಲಿ ಇಬ್ಬರು ಓಡಿ ಪರಾರಿಯಾಗಿದ್ದಾರೆ.