ಪಂದಳಂ: ಶಬರಿಮಲೆ ದೇಗುಲದಲ್ಲಿ ನಡೆದ ಚಿನ್ನ ಕಳವು ಪ್ರಕರಣಕ್ಕೆ ಇದೀಗ ಹೊಸ ತಿರುವು ಲಭಿಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ಶಬರಿಮಲೆ ದೇವಸ್ಥಾನದ ತಂತ್ರಿವರ್ಯರುಗಳಾದ ಕಂಠರರ್ ರಾಜೀವರ್ ಮತ್ತು ಕಂಠರರ್ ಮೋಹನರ್ಗಳ ಹೇಳಿಕೆಗಳನ್ನು ಈ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ ದಾಖಲಿಸಿಕೊಂಡಿದೆ.
ಮುಜರಾಯಿ ಮಂಡಳಿಯ ಅಧಿಕಾರಿಗಳು ನೀಡಿದ ನಿರ್ದೇಶದಂತೆ ಶಬರಿಮಲೆ ದೇಗುಲದ ದ್ವಾರಪಾಲಕ ಮೂರ್ತಿಗಳು ಹಾಗೂ ಗರ್ಭಗುಡಿ ಬಾಗಿಲ ಚಿನ್ನದ ಕವಚಗಳನ್ನು ಹೊರಕ್ಕೆ ಸಾಗಿಸಲು ಅನುಮತಿ ನೀಡಲಾಗಿದೆ. ದೈವಹಿತ ನೋಡಿ ಮಾತ್ರವೇ ಯಾವುದಕ್ಕೂ ಅನುಮತಿ ನೀಡುವುದು ತಂತ್ರಿವರ್ಯರ ಹೊಣೆಗಾರಿಕೆಯಾಗಿದೆಯೆಂದು ಎಸ್ಐಟಿಗೆ ನೀಡಿದ ಹೇಳಿಕೆಯಲ್ಲಿ ತಂತ್ರಿವರ್ಯರು ಸ್ಪಷ್ಟಪಡಿಸಿದ್ದಾರೆ. ಮೂರ್ತಿಗಳ ದುರಸ್ತಿ ಕೆಲಸ ನಡೆಸಬೇಕಾಗಿದೆ. ಅದರಿಂದಾಗಿ ಅದನ್ನು ಹೊರಕ್ಕೆ ಕೊಂಡು ಹೋಗಬೇಕಾಗಿದೆಯೆಂದು ಮಂಡಳಿಯ ಅಧಿಕಾರಿಗಳು ಹೇಳಿದ್ದು ಅದಕ್ಕೆ ಅನುಮತಿ ನೀಡಿದ್ದೆವು. ಈ ಪ್ರಕರಣದ ಆರೋಪಿಗಳ ಲ್ಲೋರ್ವನಾದ ಉಣ್ಣಿಕೃಷ್ಣನ್ ಪೋತ್ತಿ ಬಗ್ಗೆ ನಮಗೆ ತಿಳಿದಿತ್ತು. ಆತ ೨೦೦೮ರಲ್ಲಿ ಶಬರಿಮಲೆಯ ಸಹಾಯ ಅರ್ಚಕನಾಗಿ ಸನ್ನಿಧಾನದಲ್ಲಿ ಸೇವೆ ಸಲ್ಲಿಸಿದ್ದಾನ. ಆತನ ಬಗ್ಗೆ ಪರಿಚಯವನ್ನು ಮಾತ್ರವೇ ನಾವು ಹೊಂದಿದ್ದೇವೆ. ಆದರೆ ಆತ ಇಂತಹ ವ್ಯಕ್ತಿಯಾಗಿದ್ದಾನೆಂದು ನಮಗೆ ತಿಳಿಸಿದಿರಲಿಲ್ಲವೆಂದು ತಂತ್ರಿಗಳು ತಿಳಿಸಿದ್ದಾರೆ.






