ಕಾಸರಗೋಡು: ವಿದ್ಯಾನಗರದಲ್ಲಿರುವ ಕಾಸರಗೋಡು ನ್ಯಾಯಾಲಯ ಸಮುಚ್ಛಯಕ್ಕೆ ಬಾಂಬ್ ಬೆದರಿಕೆ ಉಂಟಾಗಿದ್ದು, ಆ ಬಗ್ಗೆ ಮಾಹಿತಿ ಲಭಿಸಿದ ವಿದ್ಯಾನಗರ ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿ ಶೋಧ ಆರಂಭಿಸಿದ್ದಾರೆ. ಶೋಧ ಕಾರ್ಯಾಚರಣೆಗಾಗಿ ಬಾಂಬ್ ಸ್ಕ್ವಾಡ್ ಮತ್ತು ಶ್ವಾನದಳವನ್ನು ಬಳಸಲಾಗುತ್ತಿದೆ. ನ್ಯಾಯಾಲಯಕ್ಕೆ ಇಂದು ಬೆಳಿಗ್ಗೆ ಇಮೇಲ್ ಸಂದೇಶದ ಮೂಲಕ ಯಾರೋ ಬಾಂಬ್ ಬೆದರಿಕೆ ಒಡ್ಡಿದ್ದಾರೆ.
ನ್ಯಾಯಾಲಯದೊಳಗೆ ರಿಮೋಟ್ ಕಂಟ್ರೋಲ್ ಚಾಲಿತ ಐಇಡಿ ಬಾಂಬ್ ಇರಿಸಲಾಗಿದೆ ಎಂದೂ, ಇಂದು ಮಧ್ಯಾಹ್ನ 1ರಿಂದ 2 ಗಂಟೆಯೊಳಗಾಗಿ ಅದು ಸ್ಫೋಟಿಸಲಿದೆ ಎಂದು ಇಮೇಲ್ ಸಂದೇಶದಲ್ಲಿ ತಿಳಿಸಲಾಗಿದೆ. ಇದನ್ನು ಗಮನಿಸಿದ ನ್ಯಾಯಾಲಯದ ಅಧಿಕಾರಿಗಳು ತಕ್ಷಣ ಪೊಲೀಸರಿಗೆ ಆ ಬಗ್ಗೆ ಮಾಹಿತಿ ನೀಡಿದ್ದಾರೆ. ಅದರಂತೆ ಪೊಲೀಸರು ಸ್ಥಳಕ್ಕೆ ಆಗಮಿಸಿ ನ್ಯಾಯಾಲಯದ ಒಳಗೆ ಹಾಗೂ ಆವರಣದೊಳಗೆ ವ್ಯಾಪಕ ಶೋಧ ಆರಂಭಿಸಿದ್ದಾರೆ.







