ಕಾಸರಗೋಡು: ಲಾರಿಯಲ್ಲಿ ತರಲಾಗುತ್ತಿದ್ದ ಮೂರು ಕೋಣಗಳ ಪೈಕಿ ಒಂದು ಕೋಣ ಲಾರಿಯಿಂದ ಜಿಗಿದು ಪ್ರಾಣಭಯದಿಂದ ಅತ್ತಿತ್ತ ಓಡುತ್ತಿದ್ದ ವೇಳೆ ಆಟವಾಡುತ್ತಿದ್ದ ಬಾಲಕನ ಮೇಲೆ ಹಾಯ್ದು ಆತ ಗಂಭೀರ ಗಾಯಗೊಂಡ ಘಟನೆ ಕೂಡ್ಲು ಕಾವುಗೋಳಿಯಲ್ಲಿ ನಡೆದಿದೆ.
ಕಾವುಗೋಳಿ ಕಡಪ್ಪುರಂ ಕೃಷ್ಣ ನಿವಾಸದ ರಾಜೇಶ್ ಎಂಬವರ ಪುತ್ರ ಆರನೇ ತರಗತಿ ವಿದ್ಯಾರ್ಥಿ ಅಧ್ವೈತ್ ಗಾಯಗೊಂಡ ಬಾಲಕ. ಗಂಭೀರ ಗಾಯಗೊಂಡ ಆತನನ್ನು ನಗರದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ಲಾರಿಯಲ್ಲಿ ಮೂರು ಕೋಣಗಳನ್ನು ತರುತ್ತಿದ್ದ ವೇಳೆ ನಿನ್ನೆ ರಾತ್ರಿ ಸುಮಾರು 7.15 ರ ವೇಳೆ ಅದರಲ್ಲಿ ಒಂದು ಕೋಣ ಲಾರಿ ಯಿಂದ ಜಿಗಿದು ಪ್ರಾಣಭಯದಿಂದ ಅತ್ತಿತ್ತ ಓಡತೊಡಗಿದೆ. ಆ ವೇಳೆ ಕಾವುಗೋಳಿ ಕಡಪ್ಪುರ ಬಳಿ ಅಧ್ವೈತ್ನ ಮೇಲೆ ಅದು ಹಾಯ್ದು ಗಂಭೀರ ಗಾಯಗೊಳಿಸಿದೆ. ತಕ್ಷಣ ಆತನನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಕೋಣ ಆವಾಂತರ ಸೃಷ್ಟಿಸಿದ ಬಗ್ಗೆ ಲಭಿಸಿದ ಮಾಹಿತಿಯಂತೆ ಸೀನಿಯರ್ ಫಯರ್ ಆಂಡ್ ರೆಸ್ಕ್ಯೂ ಆಫೀಸರ್ ಕೆ.ಸುಕು ನೇತೃತ್ವದ ಕಾಸರಗೋಡು ಅಗ್ನಿಶಾಮಕದಳ ತಕ್ಷಣ ಸ್ಥಳಕ್ಕಾಗಮಿಸಿ ಕೋಣವನ್ನು ಸೆರೆಹಿಡಿಯಲು ನಿನ್ನೆ ರಾತ್ರಿ 10.30ರ ತನಕ ವ್ಯಾಪಕ ಶೋಧ ನಡೆಸಿದರೂ ಕೋಣ ಪತ್ತೆಯಾಗಲಿಲ್ಲ.