ಕಾಸರಗೋಡು: ಹತ್ತನೇ ತರಗತಿಯ ವಿದ್ಯಾರ್ಥಿ ಮನೆಯೊಳಗೆ ನೇಣು ಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ನಡೆದಿದೆ.
ರಾವಣೇಶ್ವರ ಕುನ್ನುಪ್ಪಾರೆ ಕರಿಪ್ಪಾಡಕ್ಕನ್ ವೀಟಿಲ್ ರಾಧಾಕೃಷ್ಣನ್-ರಜಿತಾ ದಂಪತಿ ಪುತ್ರ, ಹೊಸದುರ್ಗ ಕೇಂದ್ರೀಯ ವಿದ್ಯಾಲಯದ ೧೦ನೇ ತರಗತಿ ವಿದ್ಯಾರ್ಥಿಯಾದ ಪಿ. ರಮಿತ್ (15) ಸಾವನ್ನಪ್ಪಿದ ಬಾಲಕ. ನಿನ್ನೆ ಸಂಜೆ ಮನೆಯಲ್ಲಿ ರಮಿತ್ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದನು. ಅದನ್ನು ಕಂಡ ಮನೆಯವರು ತಕ್ಷಣ ಆಸ್ಪತ್ರೆಗೆ ಸಾಗಿಸಿದರೂ ಪ್ರಾಣ ಉಳಿಸಲು ಸಾಧ್ಯವಾಗಲಿಲ್ಲ. ಕಲಿಕೆಯಲ್ಲಿ ಮುಂದಿದ್ದ ಈತ ಚೆಸ್ ತಾರೆಯೂ ಆಗಿದ್ದನು.
ಮೃತನು ಹೆತ್ತವರ ಹೊರತಾಗಿ ಸಹೋದರಿ ರಿತಿಕ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾನೆ.
ಕಳೆದ ಐದು ದಿನಗಳಲ್ಲಿ ಜಿಲ್ಲೆಯ ಲ್ಲಿ ಒಟ್ಟು ಮೂವರು ವಿದ್ಯಾರ್ಥಿಗಳು ನೇಣಿಗೆ ಶರಣಾಗಿದ್ದಾರೆ. ಪೆರಿಯ ಕಾಲಿಯಡ್ಕ ನಿವಾಸಿ ಕಲ್ಯೋಟ್ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯ ಪ್ಲಸ್ಟು ವಿದ್ಯಾರ್ಥಿ ವೈಶಾಖ್ (17) ಈತಿಂಗಳ ೧೮ರಂದು ಮನೆಯ ಕೊಠಡಿಯ ಕಿಟಿಕಿ ಸರಳಿಗೆ ನೇಣು ಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದನು.
ಬೆಳ್ಳೂರು ನೆಟ್ಟಣಿಗೆ ಕುಂಜತ್ತೋಡಿ ನಿವಾಸಿ ಜಯಕರ-ಅನಿತಾ ದಂಪತಿ ಪುತ್ರ ಬೆಳ್ಳೂರು ಸರಕಾರಿ ಹೈಯರ್ ಸೆಕೆಂಡರಿ ಶಾಲೆಯ ೯ನೇ ತರಗತಿ ವಿದ್ಯಾರ್ಥಿ ಪ್ರಜ್ವಲ್ (14) ಈತಿಂಗಳ ೧೫ರಂದು ಮನೆಯ ಬೆಡ್ರೂಂನಲ್ಲಿ ನೇಣು ಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆ ಯಾಗಿದ್ದನು. ಈ ಎರಡು ಘಟನೆಗ ಳ ಬೆನ್ನಲ್ಲೇ ನಿನ್ನೆ ರಾವಣೇಶ್ವರ ಕುನ್ನುಪ್ಪಾರದ ರಮಿತ್ ನೇಣಿಗೆ ಶರಣಾಗಿದ್ದಾನೆ. ಈ ವಿದ್ಯಾರ್ಥಿಗಳು ಆತ್ಮಹತ್ಯೆಗೈಯ್ಯಲು ಕಾರಣವೇನೆಂದು ತಿಳಿದುಬಂದಿಲ್ಲ. ಇದೇ ವೇಳೆ ರಾಷ್ಟ್ರೀಯ ಮಟ್ಟದಲ್ಲೇ ವಿದ್ಯಾರ್ಥಿ ಗಳು ಆತ್ಮಹತ್ಯೆಗೆ ಮುಂದಾಗುವ ಘಟನೆಗಳು ಹೆಚ್ಚುತ್ತಿರುವುದಾಗಿ ಅಧಿಕೃತ ಮೂಲಗಳು ತಿಳಿಸುತ್ತಿವೆ. ಕೇಂದ್ರ ವಿಶ್ವವಿದ್ಯಾನಿಲಯಗಳಲ್ಲಿ ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣ ಹೆಚ್ಚುತ್ತಿರುವುದಾಗಿ ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಆತಂಕ, ಒತ್ತಡ ನಿವಾರಿಸುವಂಗವಾಗಿ ತಿಳುವಳಿಕೆ ಮೂಡಿಸಲು ಪೆರಿಯ ಕೇಂದ್ರೀಯ ವಿಶ್ವವಿದ್ಯಾನಿಲಯಕ್ಕೆ ತಜ್ಞರ ತಂಡ ತಲುಪಿತ್ತು.






