ತಂದೆ ಚಲಾಯಿಸುತ್ತಿದ್ದ ಸ್ಕೂಟರ್‌ನಿಂದ ಎಸೆಯಲ್ಪಟ್ಟು ಎಂಟರ ಬಾಲಕ ಮೃತ್ಯು

ಕಾಸರಗೋಡು: ತಂದೆ ಚಲಾಯಿಸುತ್ತಿದ್ದ ಸ್ಕೂಟರ್‌ನಿಂದ ರಸ್ತೆಗೆ ಎಸೆಯಲ್ಪಟ್ಟು ಗಂಭೀರ ಗಾಯಗೊಂಡಿದ್ದ ಮಗು ಮೃತಪಟ್ಟಿದೆ. ಉಳಿಯತ್ತಡ್ಕ ನಿವಾಸಿ ಪ್ರಭಾಕರನ್-ಅನುಷ ದಂಪತಿಯ ಏಕ ಪುತ್ರ ಪಿ. ಪ್ರನೂಶ್ (8) ನಿನ್ನೆ ರಾತ್ರಿ ಮಂಗಳೂರಿನ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಕಳೆದ ಶುಕ್ರವಾರ ಸಂಜೆ 5 ಗಂಟೆಗೆ ಅಪಘಾತ ಸಂಭವಿಸಿತ್ತು. ಬೇಳ ಸೈಂಟ್ ಮೆರೀಸ್ ಹೈಸ್ಕೂಲ್‌ನ ವಿದ್ಯಾರ್ಥಿ ಯಾಗಿದ್ದಾನೆ. ಈ ಶಾಲೆಯಲ್ಲಿ ತಾಯಿ ಅನುಷ ಅಧ್ಯಾಪಿಕೆಯಾಗಿದ್ದಾರೆ.

ಶುಕ್ರವಾರ ಸಂಜೆ ಪ್ರಭಾಕರನ್ ಚಲಾಯಿಸುತ್ತಿದ್ದ ಸ್ಕೂಟರ್‌ನಲ್ಲಿ ಅನುಷಾ ಹಾಗೂ ಪ್ರನೂಶ್ ಸಹ ಸವಾರರಾಗಿದ್ದರು. ಕುಂಬಳೆ-ಮುಳ್ಳೇರಿಯ ಕೆಎಸ್‌ಟಿಪಿ ರಸ್ತೆಯ ಕಟ್ಟದಂಗಡಿ ತಿರುವಿನಲ್ಲಿ ಎದುರುಭಾಗದಿಂದ ಇನ್ನೊಂದು ವಾಹನ ಆಗಮಿಸಿದ್ದು, ಪ್ರಭಾಕರನ್ ಸ್ಕೂಟರನ್ನು ದಿಢೀರಾಗಿ ನಿಲ್ಲಿಸಿದಾಗ ಪ್ರನೂಶ್ ಸ್ಕೂಟರ್‌ನಿಂದ ಎಸೆಯಲ್ಪಟ್ಟಿದ್ದನು. ವಿದ್ಯಾರ್ಥಿಯ ಮರಣ ನಾಡು ಹಾಗೂ ಶಾಲೆಯಲ್ಲಿ ದುಃಖ ಸಾಗರ ಸೃಷ್ಟಿಸಿದೆ.

You cannot copy contents of this page