ಉಪ್ಪಳ: ಕೈಕಂಬ-ಬಾಯಾರು ರಸ್ತೆಯ ಜೋಡುಕಲ್ಲು ಎಂಬಲ್ಲಿ ಒಣಗಿದ ಮರಗಳು ಯಾವುದೇ ಕ್ಷಣದಲ್ಲಿ ಧರಾಶಾಯಿಗೊಳ್ಳುವ ಆತಂಕ ಕಾಡುತ್ತಿದೆ. ರಸ್ತೆ ಅಭಿವೃದ್ದಿಗೊಳಿಸುವ ವೇಳೆ ಗುತ್ತಿಗೆದಾರ ಅಪಾಯದ ಸ್ಥಿತಿಯಲ್ಲಿರುವ ಮರಗಳನ್ನು ತೆರೆವುಗೊಳಿಸಿದ್ದರು. ಅದರೆ ಒಣಗಿದ ಮರವನ್ನು ತೆರವುಗೊಳಿಸದ ಹಿನ್ನೆಲೆಯಲ್ಲಿ ಅಪಾಯ ಭೀತಿ ಉಂಟಾಗಿದೆ. ಇದೇ ಪರಿಸರದಲ್ಲಿ ಪ್ರಮುಖ ವಿದ್ಯುತ್ ತಂತಿಹೊAದಿರುವ ಕಂಬಗಳಿದ್ದು, ಮರ ಮುರಿದು ತಂತಿ ಮೇಲೆ ಬಿದ್ದಲ್ಲಿ ಹಲವಾರು ಕಂಬಗಳು ರಸ್ತೆಗೆ ಮುರಿದು ಬೀಳಬಹುದಾಗಿದೆ.
ದಿನನಿತ್ಯ ನೂರಾರು ವಾಹನಗಳು ಸಂಚರಿಸುತ್ತಿವೆ. ಅಲ್ಲದೆ ಈ ಪರಿಸರದಲ್ಲಿ ವ್ಯಾಪಾರ ಸಂಸ್ಥೆಗಳಿದ್ದು, ಜನನಿಬಿಡ ಪ್ರದೇಶವಾಗಿದೆ. ಅಪಾಯದ ಸ್ಥಿತಿಯಲ್ಲಿರುವ ಒಣಗಿದ ಮರಗಳನ್ನು ತೆರವುಗೊಳಿಸಲು ಮಂಗಲ್ಪಾಡಿ ಪಂಚಾಯತ್ ಸದಸ್ಯೆ ಸುಜಾತ.ಯು ಶೆಟ್ಟಿ ಈ ಹಿಂದೆಯೇ ರಸ್ತೆ ಅಭಿವೃದ್ದಿಯ ಗುತ್ತಿಗೆದಾರರ ಪೈವಳಿಕೆಯಲ್ಲಿರುವ ಕಚೇರಿಗೆ ಲಿಖಿತ ಮನವಿ ನೀಡಿದ್ದಾರೆ. ಒಣಗಿದ ಮರವನ್ನು ಕೂಡಲೇ ತೆರವುಗೊಳಿಸಿ ಸಂಭವಿಸಬಹುದಾದ ದುರಂತವನ್ನು ತಪ್ಪಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.







