ಮೃತಪಟ್ಟಿರುವುದಾಗಿ ಆಸ್ಪತ್ರೆ ಮೂಲಗಳು ತಿಳಿಸಿದ ವ್ಯಕ್ತಿಯ ಅಂತ್ಯಸಂಸ್ಕಾರಕ್ಕೆ ಸಿದ್ಧತೆ ವೇಳೆ ಜೀವಂತ

ಕುಂಬಳೆ: ಚಿಕಿತ್ಸೆಗಾಗಿ  ದಾಖ ಲಾಗಿದ್ದ ವ್ಯಕ್ತಿ ಮೃತಪಟ್ಟಿರುವುದಾಗಿ ಆಸ್ಪತ್ರೆ ಮೂಲಗಳು ತಿಳಿಸಿದ ಹಿನ್ನೆಲೆಯಲ್ಲಿ ವ್ಯಕ್ತಿಯನ್ನು ಮನೆಗೆ ತಲುಪಿಸಿ ಅಂತ್ಯ ಸಂಸ್ಕಾರಕ್ಕೆ ಸಿದ್ಧತೆ ನಡೆಸುತ್ತಿದ್ದಂತೆ ವ್ಯಕ್ತಿ ಜೀವಂ ತವಾಗಿರುವುದು ತಿಳಿದು ಬಂದಿದೆ. ಇದರಿಂದ ವ್ಯಕ್ತಿಯನ್ನು ಕೂಡಲೇ ಕಾಸರಗೋಡು ಜನರಲ್ ಆಸ್ಪತ್ರೆಗೆ ತಲುಪಿಸಿದ್ದು, ಇದೀಗ  ಚಿಕಿತ್ಸೆ ಯಲ್ಲಿದ್ದಾರೆ.

ಕುಂಬಳೆ ಕಂಚಿಕಟ್ಟೆ ರಾಮ್‌ನಗರ ನಿವಾಸಿ ರಾಮ್ ನಾಥ್ ಗಟ್ಟಿ (70) ಎಂಬವರಿಗೆ ಒಂದು ವಾರ ಹಿಂದೆ ೨೪ ಗಂಟೆ ಕಾಲ ವಿದ್ಯುತ್ ಮೊಟಕುಗೊಂಡ ಸಂದರ್ಭದಲ್ಲಿ  ಮನೆಯಲ್ಲಿ ಅಸೌಖ್ಯ ಕಾಣಿಸಿಕೊಂಡಿತ್ತು. ಇದರಿಂದ ಇವರನ್ನು ಕೂಡಲೇ ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಗೆ ತಲುಪಿಸಿದ್ದು, ಬಳಿಕ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ಕೊಂಡೊಯ್ಯಲಾ ಗಿತ್ತು. ಆದರೆ ಅಲ್ಲಿ ಚಿಕಿತ್ಸೆಗೆ ಸೌಕರ್ಯವಿಲ್ಲವೆಂದು ತಿಳಿಸಿದ ಹಿನ್ನೆಲೆಯಲ್ಲಿ ದೇರಳಕಟ್ಟೆ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಅನಂತರ ಅಲ್ಲಿಂದ ಮಂಗಳೂರು ಯೇನ ಪೋಯ ಆಸ್ಪತ್ರೆಗೆ ಕೊಂಡೊಯ್ದು ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಒಂದು ವಾರದ ಚಿಕಿತ್ಸೆಯ ಬಳಿಕ ಕಳೆದ ಆದಿತ್ಯವಾರ ಇವರನ್ನು ಆಸ್ಪತ್ರೆ ಯಿಂದ ಬಿಡುಗಡೆಗೊಳಿಸು ವಂತೆಯೂ ಮನೆಗೆ ತಲುಪಿಸಿ ಆಕ್ಸಿಜನ್ ತೆಗೆದ ತಕ್ಷಣ ಮೃತಪಡುವರೆಂದೂ ಆಸ್ಪತ್ರೆ ಮೂಲಗಳು ತಿಳಿಸಿವೆ. ಅಲ್ಲದೆ ಚಿಕಿತ್ಸೆಯ ಖರ್ಚಾಗಿ 1 ಲಕ್ಷ ರೂಪಾಯಿ ಬಿಲ್ ನೀಡಲಾಯಿತು. ಆಸ್ಪತ್ರೆ ಮೂಲಗಳ ನಿರ್ದೇಶದಂತೆ ರಾಮ್‌ನಾಥ್ ಗಟ್ಟಿಯವರನ್ನು ಮನೆಗೆ ತಲುಪಿಸಲಾಯಿತು. ಅಷ್ಟರಲ್ಲಿ ಸಂಬಂಧಿಕರು ಹಾಗೂ ನಾಗರಿಕರು ಅಲ್ಲಿಗೆ ತಲುಪಿದ್ದರು. ಇದೇ ವೇಳೆ ಅಂತ್ಯ ಸಂಸ್ಕಾರಕ್ಕಾಗಿ ಕುಂಟಂಗೇರಡ್ಕ ಸ್ಮಶಾನದಲ್ಲಿ ಸಿದ್ಧತೆಯನ್ನೂ ನಡೆಸಲಾಗಿತ್ತು. ಸ್ಮಶಾನಕ್ಕೆ ಕೊಂಡೊಯ್ಯುವ ಮುಂಚೆ ರಾಮ್‌ನಾಥ್ ಗಟ್ಟಿಯ ದೇಹ ಕಂಪಿಸುತ್ತಿರುವುದನ್ನು ಸಂಬಂಧಿಕರು ಗಮನಿಸಿದ್ದಾರೆ. ಇದರಿಂದ ಸಂಬಂಧಿಕರು ರಾಮ್‌ನಾಥ್ ಗಟ್ಟಿಯ ಕಾಲಿನ ಅಡಿ ಭಾಗವನ್ನು ತುರಿಸಿದಾಗ ಅವರು ಎಚ್ಚೆತ್ತುಕೊಂಡಿದ್ದಾರೆ. ಇದರಿಂದ ಕೂಡಲೇ ಅವರನ್ನು ಕಾಸರಗೋಡಿನ ಜನರಲ್ ಆಸ್ಪತ್ರೆಗೆ ತಲುಪಿಸಲಾಗಿದೆ. ಇದೀಗ ಐಸಿಯುನಲ್ಲಿ ಚಿಕಿತ್ಸೆಯಲ್ಲಿದ್ದಾರೆ.

ಇದೇ ವೇಳೆ ಜೀವಂತವಿರುವ ವ್ಯಕ್ತಿಯನ್ನು  ಆಸ್ಪತ್ರೆ ಮೂಲಗಳು ಮೃತಪಟ್ಟಿರುವುದಾಗಿ ತಿಳಿಸಿ ಮನೆಗೆ ಕಳುಹಿಸಿರುವ ವಿಚಿತ್ರ ಘಟನೆ ಕುಂ ಬಳೆಯಲ್ಲಿ ಭಾರೀ ಚರ್ಚೆಗೆಡೆಯಾಗಿದೆ.

You cannot copy contents of this page