ಪತ್ನಿಯನ್ನು ದಡದಲ್ಲಿ ನಿಲ್ಲಿಸಿ ಕ್ಷೇತ್ರದ ಕೆರೆಯಲ್ಲಿ ಸ್ನಾನಕ್ಕಿಳಿದ ಯುವಕ ಮುಳುಗಿ ಸಾವು

ಪಯ್ಯನ್ನೂರು: ಪತ್ನಿಯನ್ನು ಕೆರೆಯ ಸಮೀಪ ನಿಲ್ಲಿಸಿ ಸ್ನಾನಕ್ಕಿಳಿದ  ಯುವಕ ನೀರಿನಲ್ಲಿ ಮುಳುಗಿ ಮೃತಪಟ್ಟ ದಾರುಣ ಘಟನೆ ಸಂಭವಿಸಿದೆ. ಕಯ್ಯೂರು ಉದಯಗಿರಿಯ  ಇ.ಕೆ. ಅನಿಲ್ ಕುಮಾರ್ (36) ಮೃತಪಟ್ಟ ದುರ್ದೈವಿ. ನಿನ್ನೆ ಸಂಜೆ ಪಯ್ಯನ್ನೂರು ಶ್ರೀ ಸುಬ್ರಹ್ಮಣ್ಯ ಸ್ವಾಮಿ ಕ್ಷೇತ್ರದ ಕೆರೆಯಲ್ಲಿ ಘಟನೆ ನಡೆದಿದೆ. ಪತ್ನಿ ಶೀಬಾಳೊಂದಿಗೆ ಅನಿಲ್ ಕುಮಾರ್ ಕ್ಷೇತ್ರಕ್ಕೆ ತಲುಪಿದ್ದರು. ದರ್ಶನದ ಬಳಿಕ ಸ್ನಾನಕ್ಕೆಂದು ಅನಿಲ್ ಕುಮಾರ್ ಕ್ಷೇತ್ರದ ಕೆರೆಗಿಳಿದಿದ್ದರು.  ಪತ್ನಿಯನ್ನು ಕೆರೆ ಸಮೀಪ ನಿಲ್ಲಿಸಿ ಅನಿಲ್ ಕುಮಾರ್ ಕೆರೆಗಿಳಿದಿದ್ದು,   ಅಲ್ಪ ಹೊತ್ತಿನ ಬಳಿಕ ನಾಪತ್ತೆಯಾಗಿದ್ದರು. ಇದರಿಂದ ಶೀಬಾರ ಬೊಬ್ಬೆ ಕೇಳಿ ತಲುಪಿದ ಸ್ಥಳೀಯರು ಹಾಗೂ ಪಯ್ಯನ್ನೂರಿ ನಿಂದ ಅಗ್ನಿಶಾಮಕದಳದ ಸ್ಕೂಬಾ ಟೀಮ್ ತಲುಪಿ ಶೋಧ ನಡೆಸಿ ರಾತ್ರಿ 8 ಗಂಟೆ ವೇಳೆ ಅನಿಲ್ ಕುಮಾರ್‌ರನ್ನು ಮೇಲಕ್ಕೆತ್ತಿದ್ದು, ಅಷ್ಟರಲ್ಲಿ ಅವರು ಮೃತಪಟ್ಟಿದ್ದರು. ದಿವಂಗತರಾದ ಇ.ಕೆ. ಪ್ರಭಾಕರನ್- ಪುಷ್ಪವಲ್ಲಿಯವರ ಪುತ್ರನಾದ ಮೃತರು ಸಹೋದರಿ ಬಿಂದು ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

You cannot copy contents of this page