ಮಾನ್ಯ: ಜನ್ಮದಿನವನ್ನು ಐಷಾರಾಮಿಯಾಗಿ ಆಚರಿಸುವ ಬದಲು ಊರಿನ ದೇವಸ್ಥಾನ, ಭಜನಾಮಂದಿರಗಳಲ್ಲಿ ಆ ದಿನದಂದು ಶಾಶ್ವತ ಪೂಜೆಯ ಸಂಕಲ್ಪವನ್ನು ತೊಟ್ಟುಕೊಂಡು ಆಚರಿಸಬೇಕು, ಇದು ನಮ್ಮ ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿಗೆ ಪೂರಕವಾಗುವುದರೊಂದಿಗೆ ಮುಂದಿನ ಪೀಳಿಗೆಯು ನಮ್ಮ ಸಂಸ್ಕೃತಿ, ಸಂಸ್ಕಾರಗಳನ್ನು ಮುಂದುವರಿಸಿಕೊಂಡು ಹೋಗಲು ಕಾರಣವಾಗುತ್ತದೆ ಎಂದು ನಿವೃತ್ತ ಬ್ಯಾಂಕ್ ಪ್ರಬಂಧಕ ಕಾಟಿಪಳ್ಳ ಸುಬ್ರಹ್ಮಣ್ಯ ಹೇಳಿದರು.
ಕಾರ್ಮಾರು ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಶಾಶ್ವತ ಪೂಜಾ ಅಭಿಯಾನದ ಅಂಗವಾಗಿ ಪುದುಕೋಳಿ ಶ್ರೀಕೃಷ್ಣ ಭಟ್ಟರಿಗೆ ರಶೀದಿ ಹಸ್ತಾಂತರಿಸಿ ಅವರು ಮಾತನಾಡಿದರು. ಸೇವಾ ಸಮಿತಿ ಅಧ್ಯಕ್ಷ ನರಸಿಂಹ ಭಟ್ ಕಾರ್ಮಾರು ಅಧ್ಯಕ್ಷತೆ ವಹಿಸಿದರು. ನಿವೃತ್ತ ಅಧ್ಯಾಪಕ ಕಕ್ಕಳ ಕೃಷ್ಣ ಭಟ್, ಆಡಳಿತ ಮೊಕ್ತೇಸರ ರಾಧಾಕೃಷ್ಣ ರೈ ಕಾರ್ಮಾರು ಉಪಸ್ಥಿತರಿದ್ದರು. ಸೇವಾ ಸಮಿತಿ ಪ್ರಧಾನ ಕಾರ್ಯದರ್ಶಿ ಮಹೇಶ್ ವಳಕುಂಜ ಸ್ವಾಗತಿಸಿ, ಯುವಕವೃಂದ ಅಧ್ಯಕ್ಷ ವಿಜಯಕುಮಾರ್ ಮಾನ್ಯ ವಂದಿಸಿದರು. ಸುಂದರ ಶೆಟ್ಟಿ ಕೊಲ್ಲಂಗಾನ ನಿರೂಪಿಸಿದರು. ಈ ಸಂದರ್ಭದಲ್ಲಿ ಶ್ರೀ ದೇವರಿಗೆ ನವಾನ್ನ ಸಮರ್ಪಣೆ ಹಾಗೂ ಬಲಿವಾಡುಕೂಟ ನಡೆಯಿತು.







