ಕಾಸರಗೋಡು: ಸಮಸ್ತ ಕೇರಳ ಜಂಇಯತ್ತುಲ್ ಉಲಮ ಖಾಝಿ ಸಿ.ಎಂ. ಅಬ್ದುಲ್ಲ ಮೌಲವಿಯವರ ೧೫ ವರ್ಷ ಹಳೆಯದಾಗಿರುವ ನಿಗೂಢ ಮರಣಕ್ಕೆ ಸಂಬಂಧಿಸಿ ತನಿಖೆ ಇನ್ನು ಕಣ್ಣೂರು ರೇಂಜ್ ಡಿಐಜಿಯವರ ಮೇಲ್ನೋಟದಲ್ಲಿ ನಡೆಯಲಿದೆ. ನಿಗೂಢ ಸನ್ನಿವೇಶದಲ್ಲಿ ಅಬ್ದುಲ್ಲ ಮೌಲವಿಯವರ ಮರಣದಲ್ಲಿ ಕೊಲೆ ಕೃತ್ಯ ಸಾಧ್ಯತೆ ಇದೆ ಎಂದು ಸೂಚಿಸಿ ಖಾಝಿ ಆಕ್ಷನ್ ಸಮಿತಿ ಉಪಾಧ್ಯಕ್ಷ ಉಬೈಲುಲ್ಲ ಕಡವತ್, ಚೆಂಬರಿಕ ಜುಮಾ ಮಸೀದಿ ಸಮಿತಿ ಸದಸ್ಯ ಸರ್ದಾರ್ ಮುಸ್ತಫ ಎಂಬಿವರ ನೇತೃತ್ವದಲ್ಲಿ ಮುಖ್ಯಮಂತ್ರಿಗೆ ನೀಡಿದ ಮನವಿ ಹಿನ್ನೆಲೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ದೂರನ್ನು ಮುಖ್ಯಮಂತ್ರಿ ಡಿಜಿಪಿಗೆ ನೀಡಿದ್ದು ಡಿಜಿಪಿ ಕಣ್ಣೂರು ರೇಂಜ್ ಡಿಐಜಿಗೆ ತನಿಖೆಯ ಹೊಣೆಯನ್ನು ವಹಿಸಿಕೊಟ್ಟಿದ್ದಾರೆ. ಕಳೆದ ೧೫ ವರ್ಷದಿಂದ ಸಿಬಿಐ ತನಿಖೆ ನಡೆಸಿಯೂ ತಪ್ಪಿತಸ್ಥರ ವಿರುದ್ಧ ಪುರಾವೆಗಳೇನೂ ಲಭಿಸಿಲ್ಲವೆಂದು ಹೇಳಲಾಗುತ್ತಿದೆ.
