ಬಸ್ ನೌಕರರ ಸಮಸ್ಯೆಗಳಿಗೆ ಪರಿಹಾರ ಕ್ರಮ ಕೈಗೊಳ್ಳಬೇಕು-ಬಿಎಂಎಸ್

ಕಾಸರಗೋಡು: ಕೋವಿಡ್ ಮಹಾಮಾರಿ ಬಳಿಕ ಕಾರ್ಮಿಕ ವಲಯದಲ್ಲಿ ಅತೀ ಹೆಚ್ಚು ಸಂದಿಗ್ಧತೆ ಎದುರಿಸಬೇಕಾಗಿ ಬಂದಿರುವುದು ಬಸ್ ನೌಕರರಾಗಿದ್ದಾರೆ. ಆದ್ದರಿಂದ ಬಸ್ ನೌಕರರು ಎದುರಿಸುವ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಾಣಬೇಕೆಂದು ಕಾಸರಗೋಡು ಬಿಎಂಎಸ್ ಕಚೇರಿಯಲ್ಲಿ ನಡೆದ ಬಸ್ ಆಂಡ್ ಹೆವಿ ವೆಹಿಕಲ್ ಮಜ್ದೂರ್ ಸಂಘದ ವಾರ್ಷಿಕ ಸಮ್ಮೇಳನ ಒತ್ತಾಯಿಸಿದೆ. ಕೋವಿಡ್‌ನ ಬಳಿಕ ಸಾವಿರಾರು ಮಂದಿ ಬಸ್ ಕಾರ್ಮಿಕರು ಕೆಲಸ ಕಳೆದುಕೊಂಡಿದ್ದಾರೆ. ಕಾರ್ಮಿಕರು ಕಾರಣವಲ್ಲದಿದ್ದರೂ ಅವರ ವಿರುದ್ಧ ಕೇಸು ದಾಖಲಿಸುವಂತಹ ಘಟನೆಗಳು ನಡೆಯುತಿದೆಯೆಂದು ಸಮ್ಮೇಳನ ತಿಳಿಸಿದೆ. ಪಿಸಿಸಿ ಸರ್ಟಿಫಿಕೇಟ್ ಕಡ್ಡಾಯಗೊಳಿಸಕೂಡದೆಂದು ಈ ಕುರಿತಾಗಿ ಕಾರ್ಮಿಕ ನೇತಾರರೊಂದಿಗೆ ಮಾತುಕತೆ ನಡೆಸಬೇಕೆಂದು ಸಮ್ಮೇಳನ ಒತ್ತಾಯಿಸಿದೆ. ಅಪರಿಮಿತ ತೆರಿಗೆಯ ಕಾರಣದಿಂದಾಗಿ  ಎಲ್ಲಾ ಬಸ್‌ಗಳನ್ನು ರಸ್ತೆಗಿಳಿಸಲಾಗದಂತಹ ಸ್ಥಿತಿ ಉಂಟಾಗಿದೆ. ಇವುಗಳಿಗೆಲ್ಲಾ ಪರಿಹಾರ ಕಾಣಬೇಕೆಂದು ಸಮ್ಮೇಳನದಲ್ಲಿ ಬಿಎಂಎಸ್ ಜಿಲ್ಲಾಧ್ಯಕ್ಷ ಉಪೇಂದ್ರನ್  ಸಮ್ಮೇಳನ ಉದ್ಘಾಟಿಸಿ ರಾಜ್ಯ ಸರಕಾರವನ್ನು ಒತ್ತಾಯಿಸಿದರು.  ಯೂನಿಯನ್ ಜಿಲ್ಲಾ ಜೊತೆ ಕಾರ್ಯದರ್ಶಿ ಮಿಥುನ್ ಅಟ್ಟಕಂಡಂ ಅಧ್ಯಕ್ಷತೆ ವಹಿಸಿದರು.   ಜಿಲ್ಲಾ ಕಾರ್ಯದರ್ಶಿ ಕೆ.ವಿ. ಬಾಬು ಶುಭಾಶಂಸನೆಗೈದರು. ಜಿಲ್ಲಾ ಜೊತೆ ಕಾರ್ಯದರ್ಶಿ ದಿನೇಶ್.ಪಿ ಬಂಬ್ರಾಣ ಸಮಾರೋಪ ಭಾಷಣ ನಡೆಸಿದರು. ವಲಯ ಅಧ್ಯಕ್ಷ ಬಾಬು ಮೋನ್ ಚೆಂಗಳ ಸ್ವಾಗತಿಸಿ, ರಾಜೇಶ್ ಸಿ ವಂದಿಸಿದರು. ನೂತನ ಪದಾಧಿಕಾರಿಗಳನ್ನು ಆರಿಸಲಾಯಿತು. ಅಧ್ಯಕ್ಷರಾಗಿ ಕೆ.ವಿ. ಬಾಬು ಮಾವುಂಗಾಲ್, ಕಾರ್ಯದರ್ಶಿ ಯಾಗಿ ರಾಜೇಶ್ ಕೆ ಮನ್ನಿಪ್ಪಾಡಿ, ಕೋಶಾಧಿಕಾರಿಯಾಗಿ ಮಿಥುನ್ ಕಾಞಂಗಾಡ್, ಉಪಾಧ್ಯಕ್ಷರಾಗಿ ಸುರೇಶ್ ಮುಳ್ಳೇರಿಯ, ಅಶೋಕನ್ ಚೆರ್ಕಳ, ಗಿರೀಶ್ ಅಟ್ಟಕಂಡಂ, ಬಾಬುರಾಜ್ ಕಾಲಿಕಡವ್, ಜೊತೆ ಕಾರ್ಯದರ್ಶಿಗಳಾಗಿ ರತೀಶ್ ಮಲ್ಲ, ಪ್ರಕಾಶನ್ ಅಟ್ಟೆಂಗಾನ, ರತೀಶ್ ಕಾಟಿಪೊಯಿಲ್, ರಂಜಿತ್ ಓಡಿಯಿಟ್ಟಮಾವು, ಮನೋಜ್ ಪೊಯಿನಾಚಿ  ಹಾಗೂ ಹತ್ತು ಮಂದಿ ಸದಸ್ಯರನ್ನು ಆರಿಸಲಾಯಿತು.

You cannot copy contents of this page