ಹೊಳೆ ಮರಳು ಸಾಗಾಟ: ಪಿಕಪ್ ವಾಹನ ಸಹಿತ ಐದು ಮಂದಿ ಸೆರೆ

ಕುಂಬಳೆ: ಪುತ್ತಿಗೆ ಸೇತುವೆ ಬಳಿ ಕುಂಬಳೆ ಎಸ್‌ಐ ಕೆ. ಶ್ರೀಜೇಶ್, ಎಎಸ್‌ಐ ಅಮಿತ್‌ರಾಜ್ ನೇತೃತ್ವದ ಪೊಲೀಸರು ನಿನ್ನೆ ನಡೆಸಿದ ಕಾರ್ಯಾಚರಣೆಯಲ್ಲಿ ಪಿಕಪ್ ವಾಹನದಲ್ಲಿ ಅನಧಿಕೃತವಾಗಿ ಸಾಗಿಸುತ್ತಿದ್ದ ಹೊಳೆಯ ಮರಳು ಪತ್ತೆಹಚ್ಚಿ ವಶಪಡಿಸಿಕೊಂಡಿದ್ದಾರೆ. ಇದಕ್ಕೆ ಸಂಬಂಧಿಸಿ ಅಂಗಡಿಮೊಗರು ಬುಲಯಾಲಂನ ಅಬ್ದುಲ್ ಫೈಸಲ್ ಬುಲಯಾಲಂ (36) ಅಂಗಡಿಮೊಗರು ಪೆರಿಯಾ ಮೊಗರ್ ಹೌಸ್ ನಿವಾಸಿಗಳಾದ ಅಬ್ದುಲ್ ಅಸೀಸ್ (38), ಅಬ್ದುಲ್ ರಝಾಕ್ (40), ಅಂಗಡಿಮೊಗರು ಪುಳಕ್ಕರ ಹೌಸಿನ ಅಬ್ದುಲ್ ಫತ್ತಾಹ್ (21), ಅಂಗಡಿಮೊಗರು ಶೆರುಲಾಬಾದ್ ಹೌಸಿನ ಖಾಲಿದ್ ಎಸ್.ಎ. (೪೫) ಎಂಬವರನ್ನು ಪೊಲೀಸರು ಬಂಧಿಸಿ ಕೇರಳ ನದಿ ಸಂರಕ್ಷಣಾ ಕಾನೂನು ಪ್ರಕಾರ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಈ ಕಾರ್ಯಾಚರಣೆ ಬಳಿಕ ಲಭಿಸಿದ ಮಾಹಿತಿ ಪ್ರಕಾರ ಉಳುವಾರು ಹೊಳೆಯ ಮಾಕೂರ್‌ನಲ್ಲಿ ಪೊಲೀಸರು ನಡೆಸಿದ ಇನ್ನೊಂದು ಕಾರ್ಯಾಚರಣೆಯಲ್ಲಿ ಅಲ್ಲಿನ ಕಾಂಡ್ಲಾ ಪೊದೆಯಲ್ಲಿ ಬಚ್ಚಿಡಲಾಗಿದ್ದ ಹೊಯ್ಗೆ ಸಾಗಿಸುವ ದೋಣಿಯೊಂದನ್ನು ಪತ್ತೆಹಚ್ಚಿ ಅದನ್ನು ನಂತರ ಜೆಸಿಬಿ ಸಹಾಯದಿಂದ ಪೊಲೀಸರು ಅಲ್ಲೇ ಒಡೆದು ಹಾಕಿದ್ದಾರೆ. ಈ ಕಾರ್ಯಾಚರಣೆ ನಡೆಸಿದ ಪೊಲೀಸರ ತಂಡದಲ್ಲಿ ಸಿವಿಲ್ ಪೊಲೀಸ್ ಆಫೀಸರ್ ಜಾಬೀರ್ ಕೂಡಾ ಒಳಗೊಂಡಿದ್ದರು.

You cannot copy contents of this page