ಉಪ್ಪಳ: ಐಲ ಪರಿಸರ ಪ್ರದೇಶದಲ್ಲಿ ಮತ್ತೆ ಕಡಲ್ಗೊರೆತ ವ್ಯಾಪಕಗೊಂಡಿದ್ದು, ಒಂದು ಮನೆ ಸಮುದ್ರಪಾಲಾಗಿದೆ. ಇನ್ನೆರಡೂ ಮನೆಗಳು ಯಾವುದೇ ಕ್ಷಣದಲ್ಲಿ ಧರಾ ಶಾಯಿಯಾಗಲಿದೆ. ಐಲ ಕುದುಪುಳು ನಿವಾಸಿ ಮೀನು ಕಾರ್ಮಿಕೆ ವಸಂತಿ.ಕೆ ಎಂಬವರ ಮನೆಯ ಅಡುಗೆ ಕೋಣೆ ಭಾಗಗಳು ಸಮುದ್ರ ಪಾಲಾಗಿದೆ. ಇನ್ನು ಯಾವುದೇ ಕ್ಷಣದಲ್ಲಿ ಮನೆ ಪೂರ್ತಿ ನೀರು ಪಾಲಾಗಲಿದೆ. ಅದೇ ರೀತಿ ಐಲ ಬಂಗ್ಲ ಎಂಬಲ್ಲಿ ಮೀನು ಕಾರ್ಮಿಕರಾದ ಜಯಂತ ಮತ್ತು ಜನಾರ್ಧನ ಎಂಬವರ ಮನೆಗಳು ಅಪಾಯದಂಚಿನಲ್ಲಿದೆ. ಸಮುದ್ರದಿಂದ ಕೆಲವೇ ಮೀಟರ್ ಅಂತರದಲ್ಲಿ ಮನೆಗಳಿದ್ದು, ಸಮುದ್ರ ಪಾಲಾಗುವ ಭೀತಿಯಿದೆ. ಈಗಾಗಲೇ ಎರಡು ಕುಟುಂಬಗಳ ಹಲವು ತೆಂಗಿನ ಮರಗಳು ಸಮುದ್ರಪಾಲಾಗಿದೆ. ಈ ಎರಡು ಕುಟುಂಬಗಳನ್ನು ಸ್ಥಳಾಂತರಗೊಳಿಸಲಾಗಿದೆ. ಈ ಪರಿಸರದಲ್ಲಿ ಅವ್ಯವಸ್ಥೆಯ ಕಾಮಗಾರಿ ನಡೆಸಿರುವುದು ಕಡಲ್ಕೊರೆತ ವ್ಯಾಪಕಗೊಳ್ಳಲು ಕಾರಣವೆಂದು ಸ್ಥಳೀಯರು ತಿಳಿಸಿದ್ದಾರೆ. ಕಡಲ್ಕೊರೆತದಿಂದ ಕುಟುಂಬಗಳು ಸಂಕಷ್ಟಕ್ಕೀಡಾಗುತ್ತಿದ್ದರೂ ಅಧಿಕಾರಿ ವರ್ಗ ಯಾವುದೇ ಕ್ರಮಕ್ಕೆ ಮುಂದಾಗದಿರುವುದು ಸ್ಥಳೀಯರಲ್ಲಿ ಆಕ್ರೋಶಕ್ಕೆ ಕಾರಣವಾಗಿಸಿದೆ
