ಸ್ಕೂಟರ್ ಅಪಘಾತದಲ್ಲಿ ವಿದ್ಯಾರ್ಥಿನಿ ಮೃತ್ಯು: ನಾಡಿನಲ್ಲಿ ಶೋಕಸಾಗರ

ಕುಂಬಳೆ: ಕೊಡ್ಯಮ್ಮೆ ಪೂಕಟ್ಟೆಯಲ್ಲಿ ನಿಯಂತ್ರಣ ತಪ್ಪಿದ ಸ್ಕೂಟರ್ ರಸ್ತೆ ಬದಿಯ ಗೋಡೆಗೆ ಬಡಿದು ಸಂಭವಿಸಿದ ಅಪಘಾತದಲ್ಲಿ ೧೦ನೇ ತರಗತಿ ವಿದ್ಯಾರ್ಥಿನಿ ಮೃತಪಟ್ಟ ದಾರುಣ ಘಟನೆ ನಾಡಿನಲ್ಲಿ ಶೋಕ ಸಾಗರ ಸೃಷ್ಟಿಸಿದೆ. ಬಂಬ್ರಾಣ ಚೂರಿತ್ತಡ್ಕದ ರಸಾಕ್-ರಂಸೀನಾ ದಂಪತಿಯ ಪುತ್ರಿ ರಿಸ್ವಾನ (15) ಮೃತಪಟ್ಟ ದುರ್ದೈವಿಯಾ ಗಿದ್ದಾಳೆ. ಈಕೆ ಕೊಡ್ಯಮ್ಮೆ ಶಾಲೆಯ ವಿದ್ಯಾರ್ಥಿನಿಯಾಗಿದ್ದಾಳೆ.

ನಿನ್ನೆ ಬೆಳಿಗ್ಗೆ ರಿಸ್ವಾನ ಹಾಗೂ ಸ್ನೇಹಿತೆ ಸ್ಕೂಟರ್‌ನಲ್ಲಿ ಟ್ಯೂಶನ್‌ಗೆ ತೆರಳುತ್ತಿದ್ದಾಗ ಅಪಘಾತ ಸಂಭವಿಸಿದೆ. ಕೂಡಲೇ ಗಾಯಗೊಂಡ ರಿಸ್ವಾನ ಹಾಗೂ ಸ್ನೇಹಿತೆಯನ್ನು ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಗೆ ತಲುಪಿಸಲಾಯಿತು. ಇದೇ ವೇಳೆ ರಿಸ್ವಾನ ಗಂಭೀರ ಗಾಯಗೊಂಡ ಹಿನ್ನೆಲೆಯಲ್ಲಿ ಮಂಗಳೂರಿನ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ. ಮೃತದೇಹವನ್ನು ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ನಿನ್ನೆ ರಾತ್ರಿ 10 ಗಂಟೆ ವೇಳೆಗೆ ಮನೆಗೆ ತಲುಪಿಸಿ ಬಳಿಕ ಬಂಬ್ರಾಣ ಜುಮಾ ಮಸೀದಿ ಪರಿಸರದಲ್ಲಿ ಅಂತ್ಯ ಸಂಸ್ಕಾರ ನಡೆಸಲಾಯಿತು. ಮೃತಳು ತಂದೆ ತಾಯಿ, ಸಹೋದರ, ಸಹೋ ದರಿಯರಾದ ರಿಶಾಲ್, ರಿಧ, ರಿಫಾ, ರೈಹಾನ್ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾಳೆ.

You cannot copy contents of this page