ಕುಂಬಳೆ: ಚಾಲಕನಿಗೆ ಮದ್ಯದ ಅಮಲು ನೆತ್ತಿಗೇರಿದುದರಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಡ್ಡಾದಿಡ್ಡಿ ಸಂಚರಿಸುತ್ತಿದ್ದ ಟ್ಯಾಂಕರ್ ಲಾರಿಯನ್ನು ಹೈವೇ ಪಟ್ರೋಲಿಂಗ್ ಅಧಿಕಾರಿಗಳು ವಶಕ್ಕೆ ತೆಗೆದು ಸಂಭಾವ್ಯ ಅಪಾಯವನ್ನು ತಪ್ಪಿಸಿದ್ದಾರೆ. ವಿಷಯ ತಿಳಿದು ತಲುಪಿದ ಕುಂಬಳೆ ಪೊಲೀಸರು ಲಾರಿ ಚಾಲಕನಾದ ತಮಿಳುನಾಡು ತಂಜಾವೂರು ನಿವಾಸಿ ಬಾಲಸುಬ್ರಹ್ಮಣ್ಯನ್ (48) ಎಂಬಾತನನ್ನು ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ನಿನ್ನೆ ರಾತ್ರಿ 9 ಗಂಟೆ ವೇಳೆ ಈ ಘಟನೆ ನಡೆದಿದೆ. ಮಂಗಳೂರು ಭಾಗದಿಂದ ಕಣ್ಣೂರಿನತ್ತ ಸಂಚರಿಸುತ್ತಿದ್ದ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಡ್ಡಾದಿಡ್ಡಿಯಾಗಿ ಸಂಚರಿಸಿದೆ. ಲಾರಿ ಅಪಾಯಕರ ರೀತಿಯಲ್ಲಿ ಸಂಚರಿಸುತ್ತಿರುವ ದೃಷ್ಯ ರಾಷ್ಟ್ರೀಯ ಹೆದ್ದಾರಿ ವಿಭಾಗದ ಕ್ಯಾಮರಾದಲ್ಲಿ ಕಂಡುಬಂದಿತ್ತು. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಲಾರಿಯನ್ನು ಹಿಂಬಾಲಿಸಿದ್ದಾರೆ. ಲಾರಿ ಕುಂಬಳೆ ದೇವಿನಗರಕ್ಕೆ ತಲುಪಿದಾಗ ಅತೀ ಸಾಹಸದಿಂದ ಅಧಿಕಾರಿಗಳು ತಡೆದು ನಿಲ್ಲಿಸಿದ್ದಾರೆ. ಬಳಿಕ ಲಾರಿಗೆ ಅಧಿಕಾರಿಗಳು ಹತ್ತಿದಾಗ ಚಾಲಕ ಅದರ ಕ್ಯಾಬಿನ್ನಲ್ಲಿ ಮಲಗಿದ್ದಾನೆ. ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು ನೀಡಿದ ಮಾಹಿತಿಯಂತೆ ಕುಂಬಳೆ ಪೊಲೀಸರು ಸ್ಥಳಕ್ಕೆ ತಲುಪಿ ಹೆದ್ದಾರಿ ಮಧ್ಯೆ ನಿಲ್ಲಿಸಿದ್ದ ಲಾರಿಯನ್ನು ಬದಿಗೆ ಸರಿಸಿದ್ದಾರೆ. ಎಸ್ಐ ಕೆ ಶ್ರೀಜೇಶ್ ಅವರು ಮದ್ಯಪಾನಿ ಟ್ಯಾಂಕರ್ ಚಾಲಕನನ್ನು ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಚಾಲಕನ ಲೈಸನ್ಸ್ ರದ್ದುಪಡಿಸಲು ಶಿಫಾರಸ್ಸು ಮಾಡಲಾಗುವುದೆಂದು ಇನ್ಸ್ಪೆಕ್ಟರ್ ಪಿ.ಕೆ. ಜಿಜೀಶ್ ತಿಳಿಸಿದ್ದಾರೆ.
