ಮಂಜೇಶ್ವರ: ಸುಮಾರು 800 ವರ್ಷಗಳಿಂದ ಧಾರ್ಮಿಕ ಸೌಹಾರ್ದತೆಗೆ ಸಾಕ್ಷಿಯಾಗಿರುವ ಮಂಜೇಶ್ವರ ಉದ್ಯಾವರ ಶ್ರೀ ಅರಸು ಮಂಜೀಷ್ಣಾರ್ ಕ್ಷೇತ್ರದ ಮಹೋತ್ಸವ ದಿನಾಂಕ ನಿಗದಿ ಸಮಾರಂಭ ಕುದಿಕಳ ಎಂಬ ಹೆಸರಲ್ಲಿ ಸಂಪ್ರದಾಯ ಪ್ರಕಾರ ನಡೆಯಿತು. ಮುಸ್ಲಿಂ ಸಮುದಾಯದ ವ್ಯಾಪಾರಿಯೊಬ್ಬರಿಂದ ದೈವಪಾತ್ರಿಗಳು ವೀಳ್ಯದೆಲೆ ಮತ್ತು ಅಡಿಕೆ ಖರೀದಿಸುವುದು ಸಮಾರಂಭದ ವಿಶೇಷತೆಯಾಗಿದೆ. ಇದು ಕೋಮು ಸೌಹಾರ್ದತೆಗೆ ಸಾಕ್ಷಿಯಾಗಿದೆ. ಉದ್ಯಾವರ ಸಾವಿರ ಜಮಾಯತ್ ಸದಸ್ಯರು ಮತ್ತು ದೇವಸ್ಥಾನದ ಬ್ರಹ್ಮಸಭೆ ಎರಡು ಕಡೆಗಳಲ್ಲಿ ಕುಳಿತು ಸಮಾರಂಭದ ದಿನಾಂಕ ನಿಗದಿಪಡಿಸಿದರು. ಬಳಿಕ ಸಂಪ್ರದಾಯದಂತೆ ತೆಂಗಿನಕಾಯಿ, ವೀಳ್ಯದೆಲೆ ಮಾರಾಟ ನಡೆಯಿತು.
ಮುಸ್ಲಿಂ ಸಮುದಾಯದ ಟಿ.ಎಸ್. ಸಯ್ಯದ್ ಅವರಿಂದ ವೀಳ್ಯದೆಲೆ ಹಾಗೂ ಅಡಿಕೆಯನ್ನು ಖರೀದಿಸಲಾಯಿತು. ವಿಷು ಹಬ್ಬ ಕಳೆದು ಬರುವ ಮೊದಲ ಶುಕ್ರವಾರ ಮಸೀದಿಗೆ ತೆರಳಿ ಜಮಾಯತ್ ಸದಸ್ಯರನ್ನು ಉತ್ಸವಕ್ಕೆ ಆಮಂತ್ರಿಸಲು ತೀರ್ಮಾನಿಸಲಾಯಿತು.
ಕ್ಷೇತ್ರದ ಉತ್ಸವಕ್ಕೆ ಮೇ 9ರಂದು ಧ್ವಜಾರೋಹಣಗೊಂಡು 11, 12ರಂದು ಬಂಡಿ ಉತ್ಸವ ನಡೆಯಲಿದೆ. ಸಂಜೀವ ಶೆಟ್ಟಿ, ಕಿರಣ್ ಶೆಟ್ಟಿ, ತಿಮ್ಮ ಭಂಡಾರಿ, ಉಮೇಶ್ ಪೂಮಣ್ಣು, ವಿವಿಧ ಸಮಾಜದ ಮುಖಂಡರುಗಳು ಭಾಗವಹಿಸಿದರು.






