ಕಾಸರಗೋಡು: ಡೇಟಿಂಗ್ ಆಪ್ ಮೂಲಕ ಪರಿಚಯಗೊಂಡ 16ರ ಹರೆಯದ ಬಾಲಕನಿಗೆ ಸಲಿಂಗರತಿ ಕಿರುಕುಳ ನೀಡಿದ ಪ್ರಕರಣದಲ್ಲಿ ಮತ್ತಿಬ್ಬರನ್ನು ಸೆರೆ ಹಿಡಿಯಲಾಗಿದೆ. ಪೇರಾಂಬ್ರ ನಿವಾಸಿಯೂ, ಪಯ್ಯನ್ನೂರಿನ ಖಾಸಗಿ ಸಂಸ್ಥೆಯೊಂದರ ಮೆನೇಜರ್ ಆಗಿರುವ ಪ್ರಜೀಶ್ ಯಾನೆ ಆಲ್ಬಿನ್ (40), ಕಲ್ಲಿಕೋಟೆ ಮಾಂಕಾವು ಕಿಣಾಶೇರಿಯ ಅಬ್ದುಲ್ ಮನಾಫ್ (37) ಎಂಬಿವರು ಸೆರೆಗೀಡಾದ ಮತ್ತಿಬ್ಬರು ಆರೋಪಿಗಳು. ಪ್ರಜೀಶ್ನನ್ನು ಪಯ್ಯನ್ನೂರು ಪೊಲೀಸರು ಹಾಗೂ ಮನಾಫ್ನನ್ನು ಕಲ್ಲಿಕೋಟೆ ಪೊಲೀಸರು ಬಂಧಿಸಿದ್ದಾರೆ. ಇದರೊಂದಿಗೆ ಬಾಲಕನಿಗೆ ಸಲಿಂಗರತಿ ಕಿರುಕುಳ ನೀಡಿದ ಪ್ರಕರಣದಲ್ಲಿ ಸೆರೆಗೀಡಾದವರ ಸಂಖ್ಯೆ 12ಕ್ಕೇರಿದೆ. ಇನ್ನೂ ನಾಲ್ಕು ಮಂದಿ ಆರೋಪಿಗಳನ್ನು ಸೆರೆ ಹಿಡಿಯಲು ಬಾಕಿಯಿದೆ. ಅವರ ಪತ್ತೆಗಾಗಿ ತನಿಖೆ ತೀವ್ರಗೊಳಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಚಂದೇರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಾಸಿಸುವ 16ರ ಹರೆಯದ ಬಾಲಕನಿಗೆ ಆರೋಪಿಗಳು ಕಿರುಕುಳ ನೀಡಿರುವುದಾಗಿ ದೂರಲಾಗಿದೆ. ಪ್ರಕರಣದಲ್ಲಿ ಬೇಕಲ ಎಇಒ, ಪಡನ್ನ ನಿವಾಸಿಯೂ ಆದ ವಿ.ಕೆ. ಸೈನುದ್ದೀನ್ (52), ಪಡನ್ನಕ್ಕಾಡ್ನ ರಂಸಾನ್ (64), ಆರ್ಪಿಎಫ್ ನೌಕರ ಪಿಲಿಕ್ಕೋಡ್ ಎರಾವ್ನ ಚಿತ್ರರಾಜ್ (48), ತೃಕರಿಪುರ ವಾಳ್ವಕ್ಕಾಡ್ನ ಕುಞಹಮ್ಮದ್ (55), ಪೂಚೋಲಿಯ ನಾರಾಯಣನ್ (60), ವಡಕ್ಕೇ ಕೊವ್ವಲ್ನ ರಯೀಸ್ (30), ವೆಳ್ಳಚ್ಚಾಲ್ನ ಸುಕೇಶ್ (30), ಚೀಮೇನಿಯ ಶಿಜಿತ್ (36), ಪಯ್ಯನ್ನೂರು ಕೋರೋತ್ನ ಸಿ. ಗಿರೀಶ್ (47) ಎಂಬಿವರನ್ನು ಈ ಹಿಂದೆ ಬಂಧಿಸಲಾಗಿತ್ತು. ಇವರೆಲ್ಲರೂ ಇದೀಗ ರಿಮಾಂಡ್ನಲ್ಲಿದ್ದಾರೆ. ಯೂತ್ ಲೀಗ್ ಪ್ರಾದೇಶಿಕ ನೇತಾರ ತೃಕರಿಪುರ ವಡಕುಂಬಾಟ್ನ ಸಿರಾಜ್ ಸಹಿತ ನಾಲ್ಕು ಮಂದಿ ಆರೋಪಿಗಳು ಇದೀಗ ತಲೆಮರೆಸಿಕೊಂಡಿದ್ದಾರೆ.