ಉಪ್ಪಳ: ಸ್ಥಳೀಯಾಡಳಿತ ಚುನಾವಣೆಯಲ್ಲಿ ಕಾಸರಗೋಡು ಜಿಲ್ಲೆಯಾದ್ಯಂತ, ಪ್ರತ್ಯೇಕವಾಗಿ ಮಂಜೇಶ್ವರ ವಿಧಾನಸಭಾ ಮಂಡಲದಲ್ಲಿ ಐಕ್ಯರಂಗ ಭಾರೀ ಬಹುಮತ ಗಳಿಸಲಿದೆ ಎಂದು ಶಾಸಕ ಎಕೆಎಂ ಅಶ್ರಫ್ ನುಡಿದರು. ಕೇಂದ್ರ, ರಾಜ್ಯ ಸರಕಾರಗಳ ಆಡಳಿತದಿಂದ ಜನರು ಬಡತನದತ್ತ ತಳ್ಳಲ್ಪಟ್ಟಿದ್ದು, ಶ್ರೀಮಂತರು ಹಾಗೂ ಬಡವರ ಮಧ್ಯೆಗಿನ ಅಂತರ ಹೆಚ್ಚಾಗಿದೆ ಎಂದು ಅವರು ದೂರಿದರು. ಬೆಲೆಯೇರಿಕೆಯಿಂದಾಗಿ ಜನರು ಸಂಕಷ್ಟಪಡುತ್ತಿದ್ದು ಈ ಚುನಾವಣೆಯಲ್ಲಿ ಐಕ್ಯರಂಗಕ್ಕೆ ಮತ ನೀಡುವರು ಎಂದು ಅವರು ಅಭಿಪ್ರಾಯಪಟ್ಟರು. ಮಂಗಲ್ಪಾಡಿ ಪಂಚಾಯತ್ ಸಹಿತ ಐಕ್ಯರಂಗವನ್ನು ಸೋಲಿಸಲು ಜನಪರ ಅಭ್ಯರ್ಥಿ ಎಂಬ ಹೆಸರಲ್ಲಿ ಒಕ್ಕೂಟ ರೂಪಿಸಿ ನಡೆಸುವ ಯುಡಿಎಫ್ ವಿರೋಧಿಗಳ ಯತ್ನ ವಿಫಲಗೊಳ್ಳಲಿದೆ ಎಂದು ಶಾಸಕರು ನುಡಿದರು. ಜಿಲ್ಲಾ ಪಂಚಾಯತ್ ಸಹಿತ ಈ ಬಾರಿ ಐಕ್ಯರಂಗ ಉತ್ತಮ ಸಾಧನೆ ಮಾಡಲಿದೆ ಎಂದು ಎಕೆಎಂ ಅಭಿಪ್ರಾಯಪಟ್ಟಿದ್ದಾರೆ.







