ಕಾಸರಗೋಡು: ನಿದ್ರಿಸಿದ್ದ ಯುವತಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ನಡೆದಿದೆ. ಉಳಿಯತ್ತಡ್ಕ ಬಳಿಯ ಗುವೆತ್ತಡ್ಕ ಜಿ.ಕೆ.ನಗರದ ವಿನ್ಸೆಂಟ್ ಕ್ರಾಸ್ತ ಎಂಬವರ ಪುತ್ರಿ ಸೌಮ್ಯ ಕ್ರಾಸ್ತ (25) ಮೃತ ಯುವತಿ. ಈಕೆ ನಿನ್ನೆ ರಾತ್ರಿ ಊಟ ಮಾಡಿ ನಿದ್ರಿಸಿದ್ದರು. ಇಂದು ಬೆಳಿಗ್ಗೆ ಏಳಲಿಲ್ಲವೆನ್ನಲಾಗಿದೆ. ಇದರಿಂದ ಮನೆಯವರು ಎಬ್ಬಿಸಲೆತ್ನಿಸಿದಾಗ ಪ್ರಜ್ಞಾಹೀನ ಸ್ಥಿತಿಯಲ್ಲಿ ಕಂಡು ಬಂದಿದ್ದು, ಕೂಡಲೇ ಕಾಸರಗೋಡಿನ ಖಾಸಗಿ ಆಸ್ಪತ್ರೆಗೆ ತಲುಪಿಸಿದ್ದರು. ಆದರೆ ಅಷ್ಟರೊಳಗೆ ಯುವತಿ ಮೃತಪಟ್ಟಿರುವುದಾಗಿ ವೈದ್ಯರು ಸಂಬಂಧಿಕರಲ್ಲಿ ತಿಳಿಸಿದ್ದಾರೆ. ಬಳಿಕ ಮೃತದೇಹವನ್ನು ಜನರಲ್ ಆಸ್ಪತ್ರೆ ಶವಾಗಾರಕ್ಕೆ ತಲುಪಿಸಲಾಯಿತು.
ಮೃತರು ತಂದೆ, ತಾಯಿ ಫ್ಲೋರ, ಸಹೋದರ-ಸಹೋದರಿಯರಾದ ಸ್ಟೀವನ್ ಕ್ರಾಸ್ತ, ಅವಿನಾಶ್ ಕ್ರಾಸ್ತ, ರೂಪ ಕ್ರಾಸ್ತ, ಕ್ರಾಸ್ತ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.