ಈದ್ ಮಿಲಾದ್ ಮೆರವಣಿಗೆ ವೇಳೆ ಸೌಹಾರ್ದತೆ ಮೆರೆದ ಹಿಂದೂ ಬಾಂಧವರು
ಮಂಜೇಶ್ವರ : ಈದ್ ಮಿಲಾದ್ ಹಬ್ಬದ ಪ್ರಯುಕ್ತ ಉದ್ಯಾವರ ಸಾವಿರ ಜಮಾಯತ್ ವತಿಯಿಂದ ನಡೆದ ಮೆರವಣಿಗೆಯಲ್ಲಿ ಸೌಹಾರ್ದತೆ ಕಂಡು ಬಂದಿದೆ. ಮೆರವಣಿಗೆಯಲ್ಲಿ ಹಿಂದೂ ಬಾಂಧವರು ಮುಸ್ಲಿಮರನ್ನು ಆತ್ಮೀಯವಾಗಿ ಸ್ವಾಗತಿಸಿ, ಸಿಹಿ ತಿಂಡಿ ವಿತರಣೆ ಮೂಲಕ ಬಾಂಧವ್ಯವನ್ನು ಬಲಪಡಿಸುವ ದೃಶ್ಯ ಕಂಡು ಬಂತು.
ಉದ್ಯಾವರದ ಸಾವಿರ ಜಮಾಯತ್ನ ವತಿಯಿಂದ ಆಯೋಜಿಸಿದ್ದ ಮೆರವಣಿಗೆಯಲ್ಲಿ 13 ಮೊಹಲ್ಲಾಗಳ ಮದ್ರಸ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಮೆರವಣಿಗೆ ಕರೋಡ ಭಾಗದಲ್ಲಿ ತಲುಪುತಿದ್ದಂತೆ ಶ್ರೀ ಅರಸು ಮಂಜಿಷ್ಣಾರ್ ಕ್ಷೇತ್ರದ ದೈವಪಾತ್ರಿ ರಾಜ ಬೆಳ್ಚಾಡರವರ ನೇತೃತ್ವದಲ್ಲಿ ಹಿಂದೂ ಬಾಂಧವರು ಸಿಹಿ ತಿಂಡಿ ವಿತರಿಸಿದರು. ಮೆರವಣಿಗೆ ಉದ್ಯಾವರಕ್ಕೆ ತಲುಪುತ್ತಿದ್ದಂತೆಯೇ ಮುಸ್ಲಿಂ ಬಾಂಧವರನ್ನು ಆತ್ಮೀಯವಾಗಿ ಸ್ವಾಗತಿಸಿ ಸಿಹಿ ತಿಂಡಿಗಳನ್ನು ಹಂಚಿದರು.