ಕರ್ನಾಟಕದಲ್ಲಿ ವಿದ್ಯುತ್ ನಿಯಂತ್ರಣ : ಕಾಸರಗೋಡು- ಮಂಜೇಶ್ವರ ತಾಲೂಕುಗಳಲ್ಲಿ ಲೋಡ್ ಶೆಡ್ಡಿಂಗ್ ; ಕಂಗಾಲಾದ ಎಸ್‌ಎಸ್‌ಎಲ್‌ಸಿ- ಹೈಯರ್ ಸೆಕೆಂಡರಿ ಪರೀಕ್ಷಾ ವಿದ್ಯಾರ್ಥಿಗಳು

ಕಾಸರಗೋಡು: ಕರ್ನಾಟಕದಲ್ಲಿ ವಿದ್ಯುತ್ ಲೈನ್‌ಗಳ ದುರಸ್ತಿ ಕೆಲಸದ ಹೆಸರಲ್ಲಿ ಕಾಸರಗೋಡು ಮತ್ತು ಮಂಜೇಶ್ವರ ತಾಲೂಕುಗಳಲ್ಲಿ ವಿದ್ಯುತ್ ಲೋಡ್ ಶೆಡ್ಡಿಂಗ್ ಏರ್ಪಡಿಸಲಾಗಿದೆ. ಇದರಂತೆ ವಿದ್ಯಾನಗರ, ಮುಳ್ಳೇರಿಯ, ಮಂಜೇಶ್ವರ ಮತ್ತು ಕುಬಣೂರು 110 ಕೆ.ವಿ ಸೇರಿದಂತೆ ಒಟ್ಟು ಎಂಟು ವಿದ್ಯುತ್ ಸಬ್ ಸ್ಟೇಷನ್‌ಗಳ ವ್ಯಾಪ್ತಿಗೊಳಪಟ್ಟ ಪ್ರದೇಶಗಳಲ್ಲಿ ನಿನ್ನೆ ಸಂಜೆಯಿಂದ ದೈನಂದಿನ ಅರ್ಧ ತಾಸು ಲೋಡ್‌ಶೆಡ್ಡಿಂಗ್ ಏರ್ಪಡಿಸಲಾಗಿದೆ.

ಇದು ಮುಂದಿನ ಐದು ದಿನಗಳ ತನಕ ಮುಂದುವರಿಯಲಿದೆ ಎಂದು ಟ್ರಾನ್ಸ್ ವಿದ್ಯುತ್ ಟ್ರಾನ್ಸ್‌ಮಿಷನ್ ಡಿವಿಷನ್‌ನ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಈ ಸಮಯ ವ್ಯಾಪ್ತಿ ಕೆಲವೊಮ್ಮೆ ಇನ್ನೂ ಮುಂದುವರಿಯುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲವೆಂದೂ ಅಧಿಕಾರಿಗಳು ತಿಳಿಸಿದ್ದಾರೆ.

ಎಸ್‌ಎಸ್‌ಎಲ್‌ಸಿ ಮತ್ತು ಹೈಯರ್ ಸೆಕೆಂಡರಿ ಪರೀಕ್ಷೆ ಆರಂಭಗೊಂಡಿರುವ ವೇಳೆಯಲ್ಲೇ ಜಿಲ್ಲೆಯಲ್ಲಿ ಲೋಡ್ ಶೆಡ್ಡಿಂಗ್ ಏರ್ಪಡಿಸಿದ್ದು, ಅದು ಈ ಪರೀಕ್ಷೆಗೆ ಬರೆಯುವ ವಿದ್ಯಾರ್ಥಿಗಳನ್ನು ತೀವ್ರ ಸಂಕಷ್ಟಕ್ಕೆ ಸಿಲುಕಿಸಿದೆ.

ಜಿಲ್ಲೆಯಲ್ಲಿ ಮಂಜೇಶ್ವರ ಮತ್ತು ಕುಬಣೂರು ವಿದ್ಯುತ್ ಸಬ್ ಸ್ಟೇಷನ್‌ಗಳ ವ್ಯಾಪ್ತಿಗೊಳಪಟ್ಟ ಪ್ರದೇಶಗಳಲ್ಲಿ ಕರ್ನಾಟಕದಿಂದ ಲಭಿಸುವ ವಿದ್ಯುತ್ ಉಪಯೋಗಿಸ ಲಾಗುತ್ತಿದೆ. ಇಲ್ಲಿಗೆ ಕರ್ನಾಟಕದಿಂದ ದೈನಂದಿನ ೫೦ ಮೆಘಾವಾಟ್ ವಿದ್ಯುತ್ ಲಭಿಸುತ್ತಿದೆ. ಆ ಪೂರೈಕೆಯನ್ನು ಈಗ 10 ಮೆಘಾವಾಟ್ ಆಗಿ ಇಳಿಸಲಾಗಿದೆ.

ಕರ್ನಾಟಕದ ವಾರಾಹಿ ಹೇಗುಂಚೆ 220 ಕೆ.ವಿ. ವಿದ್ಯುತ್ ಲೈನ್‌ಗಳ ದುರಸ್ತಿ ಈಗ ನಡೆಯುತ್ತಿದ್ದು, ಇದುವೇ ಜಿಲ್ಲೆಯಲ್ಲಿ ಲೋಡ್ ಶೆಡ್ಡಿಂಗ್ ಏರ್ಪಡಿಸಿರು ವುದರ ಪ್ರಧಾನ ಕಾರಣವಾಗಿದೆ. ಇದರ ಪರಿಣಾಮ ಮುಳ್ಳೇರಿಯ ಪೆರ್ಲ, ಬದಿಯಡ್ಕ, ಅನಂತಪುರ ಮತ್ತು ಕಾಸರಗೋಡು ಸಬ್ ಸ್ಟೇಷನ್‌ಗಳ ವ್ಯಾಪ್ತಿಯಲ್ಲೂ ಲೋಡ್ ಶೆಡ್ಡಿಂಗ್ ಏರ್ಪಡಿಸಲಾಗಿದೆ.

RELATED NEWS

You cannot copy contents of this page