ಕಾರು ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದು ಯುವಕ ಮೃತ್ಯು: ಸಹೋದರನಿಗೆ ಗಂಭೀರ ಗಾಯ

ಬದಿಯಡ್ಕ: ನಿಯಂತ್ರಣ ತಪ್ಪಿದ ಕಾರು ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ಯುವಕ ಮೃತಪಟ್ಟು, ಸಹೋದರ ಗಂಭೀರ ಗಾಯಗೊಂಡ ಘಟನೆ ನಡೆದಿದೆ.

ನಿನ್ನೆ ರಾತ್ರಿ 10 ಗಂಟೆ ವೇಳೆ ಮಾವಿನಕಟ್ಟೆಯಲ್ಲಿ ಈ ಅಪಘಾತ ಸಂಭವಿಸಿದೆ. ಮಾವಿನಕಟ್ಟೆ ಮಸೀದಿ  ಬಳಿಯ ನಿವಾಸಿ ಅಬ್ದುಲ್ಲ ಎಂಬವರ  ಪುತ್ರ ಕಲಂದರ್ ಸಮ್ಮಾಸ್ (21) ಮೃತಪಟ್ಟ ದುರ್ದೈವಿಯಾಗಿದ್ದಾರೆ. ಇವರ ಸಹೋದರ ಮೊಯ್ದೀನ್ ಸರ್ವಾಸ್ (19) ಗಂಭೀರ ಗಾಯಗೊಂಡಿದ್ದು, ಇವರನ್ನು ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಸಹೋದರರು  ಸಂಬಂಧಿಕರ ಮನೆಗೆ ತೆರಳಿ ಮರಳುತ್ತಿದ್ದಾಗ  ಅಪಘಾತ ಸಂಭವಿಸಿದೆ. ನಿಯಂತ್ರಣ ತಪ್ಪಿದ ಕಾರು  ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದು ಮಗುಚಿಬಿದ್ದಿದೆ. ಈ ವೇಳೆ ಕಾರಿನಿಂದ ಹೊರಕ್ಕೆಸೆಯಲ್ಪಟ್ಟ ಕಲಂದರ್ ಸಮ್ಮಾಸ್‌ಗೆ ವಿದ್ಯುತ್ ಕಂಬದಿಂದ ಶಾಕ್ ತಗಲಿರುವುದು ಸಾವಿಗೆ ಕಾರಣವೆಂದು ತಿಳಿದುಬಂದಿದೆ.  ಅಪಘಾತ ತಿಳಿದು ಅಲ್ಲಿಗೆ ತಲುಪಿದ ನಾಗರಿಕರು ಗಾಯಗೊಂಡ ಯುವಕರನ್ನು ಕೂಡಲೇ ಚೆಂಗಳದ ಆಸ್ಪತ್ರೆಗೆ ಕೊಂಡೊಯ್ದರೂ ಈ ಮಧ್ಯೆ ಕಲಂದರ್ ಸಮ್ಮಾಸ್ ಮೃತಪಟ್ಟಿದ್ದಾರೆ. ಮೃತ ಕಲಂದರ್ ಸಮ್ಮಾಸ್ ಬದಿಯಡ್ಕದ ಬೇಕರಿಯೊಂದರ ನೌಕರನಾಗಿದ್ದಾರೆ.

ಮೃತರು ತಂದೆ, ತಾಯಿ ಬೀಫಾತ್ತಿಮ, ಇತರ ಸಹೋದರರಾದ ಸಾಬಿರ್, ಸಹದ್, ಸುಹೈಲ್(ಗಲ್ಫ್ ಉದ್ಯೋಗಿಗಳು), ಸಹೋದರಿ ಶಬಾನ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಅಪಘಾತದಲ್ಲಿ ಯುವಕ ಮೃತಪಟ್ಟ ಘಟನೆಯಿಂದ ನಾಡಿನಲ್ಲಿ ಶೋಕಸಾಗರ ಸೃಷ್ಟಿಯಾಗಿದೆ. ಅಪಘಾತ ಬಗ್ಗೆ ಬದಿಯಡ್ಕ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *

You cannot copy content of this page