ಕೊಲ್ಲಿಯಿಂದ ಮರಳಿದ ಯುವಕ ಬೆಂಗಳೂರಿನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ
ಕಾಸರಗೋಡು: ವಾರಗಳ ಹಿಂದೆ ಕೊಲ್ಲಿಯಲ್ಲಿ ಕೆಲಸಕ್ಕೆ ರಾಜೀನಾಮೆ ನೀಡಿ ಊರಿಗೆ ಹಿಂತಿರುಗಿದ ಯುವಕ ಬೆಂಗಳೂರಿನಲ್ಲಿ ನೇಣು ಬಿಗಿದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಹಚ್ಚಲಾಗಿದೆ. ಮೇಲ್ಪರಂಬ ಪೊಲೀಸ್ ಠಾಣೆ ವ್ಯಾಪ್ತಿಯ ಕೋಳಿಯಡ್ಕ, ಅನಿಞದ ದಿ| ಚಂದುಟ್ಟಿ ಮಣಿಯಾಣಿ- ಕಾವೇರಿ ದಂಪತಿ ಪುತ್ರ ಕಾಪುಂಕಯ ಉಣ್ಣಿಕೃಷ್ಣನ್ (37) ಮೃತಪಟ್ಟ ಯುವಕ. ನಿನ್ನೆ ಮುಂಜಾನೆ ಬೆಂಗಳೂರಿನ ಫ್ಲಾಟ್ನಲ್ಲಿ ಯುವಕ ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಬೆಂಗಳೂರಿನಲ್ಲಿ ಕೆಲಸದಲ್ಲಿರುವ ಪತ್ನಿ ಅಂಜು ರಾತ್ರಿ ಪಾಳಿ ಕೆಲಸ ಮುಗಿಸಿ ಮುಂಜಾನೆ ಫ್ಲಾಟ್ಗೆ ತಲುಪಿದಾಗ ಪತಿ ನೇಣು ಬಿಗಿದ ಸ್ಥಿತಿಯಲ್ಲಿ ಕಂಡಿದ್ದಾರೆ. ಮಾಹಿತಿ ತಿಳಿದು ಸಂಬಂಧಿಕರು ಬೆಂಗಳೂರಿಗೆ ತೆರಳಿದ್ದಾರೆ. ಗಲ್ಫ್ನಲ್ಲಿದ್ದ ಉಣ್ಣಿ ಕೃಷ್ಣನ್ ಮೂರು ವಾರದ ಹಿಂದೆ ಊರಿಗೆ ತಲುಪಿದ್ದರು. ಮೇ ೨೫ರಂದು ಇವರು ಬೆಂಗಳೂರಿಗೆ ತೆರಳಿದ್ದರು. ಆತ್ಮಹತ್ಯೆಗೆ ಕಾರಣ ಸ್ಪಷ್ಟಗೊಂಡಿಲ್ಲ.
ಒಂದೂವರೆ ವರ್ಷದ ಹಿಂದೆ ಉಣ್ಣಿಕಷ್ಣನ್ ಇಡುಕ್ಕಿ ನಿವಾಸಿ ಅಂಜುರನ್ನು ವಿವಾಹವಾಗಿದ್ದರು. ಮೃತರು ತಾಯಿ, ಪತ್ನಿ, ಸಹೋದರರಾದ ನಾರಾಯಣನ್, ಪ್ರಶಾಂತನ್, ಸಹೋದರಿ ಅಂಬಿಕ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.