ರಾಜ್ಯದ ಮತದಾರ ಯಾದಿಯಿಂದ ಅಕ್ರಮ ವಲಸೆಗಾರರನ್ನು ತೆಗೆದು ಹಾಕುವ ಕ್ರಮ ಆರಂಭ
ತಿರುವನಂತಪುರ: ಕೇರಳ ಸೇರಿದಂತೆ ಆರು ರಾಜ್ಯಗಳ ಮತದಾರ ಯಾದಿಯಿಂದ ಅಕ್ರಮ ವಲಸಿಗರನ್ನು ತೆಗೆದುಹಾಕುವ ಹೊಸ ಕ್ರಮವನ್ನು ಭಾರತೀಯ ಚುನಾವಣಾ ಆಯೋಗ ಆರಂಭಿಸಿದೆ. ಇದರಂತೆ ಮತದಾರ ಯಾದಿಯಲ್ಲಿ ಹೆಸರು ಒಳಗೊಂಡಿರುವ ಅಕ್ರಮ ವಲಸಿಗರನ್ನು ಗುರುತಿಸಿ ಅವರನ್ನು ಯಾದಿಯಿಂದ ತೆಗೆದುಹಾಕುವ ಸಲುವಾಗಿ ಅವರ ಮನೆಗಳಿಗೆ ನೇರವಾಗಿ ಸಾಗಿ ಪರಿಶೀಲಿಸುವ ಕ್ರಮಕ್ಕೂ ಆಯೋಗ ಚಾಲನೆ ನೀಡಿದೆ.
ಈ ತೀವ್ರ ಮತದಾರ ಪಟ್ಟಿ ಸಮೀಕ್ಷೆಯು ಅಕ್ರಮ ವಲಸಿಗರು ಮತ್ತು ಅನರ್ಹರಾದ ಮತದಾರರ ಹೆಸರನ್ನು ಗುರುತಿಸುವ ಹಾಗೂ ತೆಗೆದುಹಾಕುವ ಮೂಲಕ ಮತದಾರರ ಪಟ್ಟಿಯ ಸಮಗ್ರತೆಯನ್ನು ಖಚಿತಪಡಿಸುವ ಗುರಿ ಹಾಕಿಕೊಳ್ಳಲಾಗಿದೆಯೆಂದು ಚುನಾವಣಾ ಆಯೋಗ ತಿಳಿಸಿದೆ.
ವಿಧಾನಸಭೆಗಳಿಗೆ ಶೀಘ್ರ ಚುನಾವಣೆ ನಡೆಯಲಿರುವ ರಾಜ್ಯಗಳಲ್ಲಿ ಮೊದಲು ಇಂತಹ ಕ್ರಮ ಆರಂಭಿಸಲಾಗಿದೆ. ಮತದಾರ ಯಾದಿಯ ವಿಶೇಷ ತೀವ್ರ ಪರಿಷ್ಕರಣೆಯ ಭಾಗ ಇದಾಗಿದೆಯೆಂದು ಆಯೋಗ ತಿಳಿಸಿದೆ.
ಪಶ್ಚಿಮಬಂಗಾಲ, ಬಿಹಾರ, ಅಸ್ಸಾಂ, ಕೇರಳ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಲಕ್ಷಾಂತರ ಮಂದಿ ವಲಸೆ ಕಾರ್ಮಿಕರು ಮತದಾರ ಯಾದಿಯಲ್ಲಿ ತಮ್ಮ ಹೆಸರು ಸೇರ್ಪಡೆಗೊಳಿಸಿದ್ದಾರೆ. ಹೀಗೆ ಹೆಸರು ಸೇರಿಸಿದವರಲ್ಲಿ ಬಾಂಗ್ಲಾದೇಶ, ಮ್ಯಾನ್ಮಾರ್ ಮಾತ್ರವಲ್ಲ ಪಾಕಿಸ್ತಾನದಿಂದ ಭಾರತದೊಳಗೆ ಅಕ್ರಮವಾಗಿ ನುಸುಳಿ ಬಂದಿರುವವರೂ ಒಳಗೊಂಡಿದ್ದಾರೆಂಬ ದೂರುಗಳು ವರ್ಷಗಳ ಹಿಂದೆಯೇ ಉಂಟಾಗಿತ್ತು. ಆದರೆ ಇದೇ ಸಂದರ್ಭದಲ್ಲಿ ಅಕ್ರಮ ವಲಸಿಗರನ್ನು ಮತದಾರ ಯಾದಿಯಿಂದ ತೆಗೆದುಹಾಕಿ ಚುನಾವಣಾ ಆಯೋಗದ ಕ್ರಮವನ್ನು ವಿರೋಧಿಸಿ ಕೆಲವು ರಾಜಕೀಯ ಪಕ್ಷಗಳು ರಂಗಕ್ಕಿಳಿದಿವೆ.