ಲಕ್ಷಾಂತರ ರೂ. ವೆಚ್ಚದಲ್ಲಿ ನಿರ್ಮಿಸಿದ ಪ್ರವಾಸೋದ್ಯಮ ವಿಶ್ರಾಂತಿ ಕೇಂದ್ರ ಸಮುದ್ರಪಾಲು ಭೀತಿ
ಮಂಜೇಶ್ವರ: ಜಿಲ್ಲಾ ಟೂರಿಸಂ ಪ್ರಮೋಷನ್ ಕೌನ್ಸಿಲ್ ಮಂಜೇಶ್ವರ ಕಣ್ವತೀರ್ಥ ಕಡಲ ತೀರದಲ್ಲಿ ಪ್ರವಾಸಿಗರಿಗಾಗಿ ನಿರ್ಮಿಸಿದ ವಿಶ್ರಾಂತಿ ಕೇಂದ್ರ ಸಮುದ್ರಪಾಲಾಗುವ ಸ್ಥಿತಿಯಲ್ಲಿದ್ದು, ಲಕ್ಷಾಂತರ ರೂ. ನೀರುಪಾಲಾಗಲಿದೆ. 2023 ರಲ್ಲಿ ವಿಶ್ರಾಂತಿ ಕೇಂದ್ರದ ಕಾಮಗಾರಿ ಪೂರ್ಣಗೊಳ್ಳಬೇಕಾಗಿತ್ತು. ಆದರೆ ಹಲವು ವಿಘ್ನಗಳಿಂದಾಗಿ ನಿರ್ಮಾಣ ಕಾರ್ಯ ವಿಳಂಬವಾಗಿದೆ. ಈಗ ಸುಮಾರು 60 ಶೇಕಡಾ ಕಟ್ಟಡ ಕಾಮಗಾರಿ ಪೂರ್ಣಗೊಂಡಿದ್ದು, ಇದಕ್ಕಾಗಿ 89 ಲಕ್ಷ ರೂ. ವೆಚ್ಚ ಮಾಡಲಾಗಿದೆ. 1 ಕೋಟಿ 15 ಲಕ್ಷ ರೂ.ಗಳ ಯೋಜನೆ ಟೂರಿಸಂ ಪ್ರಮೋಷನ್ ಕೌನ್ಸಿಲ್ ಹಾಕಿಕೊಂಡಿತ್ತು.
ಕಡಲ್ಕೊರೆತದಿಂದಾಗಿ ಕಟ್ಟಡವಿರುವ ಸ್ಥಳದ ಮಣ್ಣು ನೀರುಪಾಲಾಗಿದ್ದು, ಕಟ್ಟಡ ಸಮುದ್ರಪಾಲಾಗಲಷ್ಟೇ ಇನ್ನು ಬಾಕಿ ಉಳಿದಿದೆ. ಮುಂದಿನ ದಿನಗಳಲ್ಲಿ ಕಡಲ್ಕೊರೆತ ತೀವ್ರಗೊಂಡರೆ ಈ ಕಟ್ಟಡ ನೀರಿನೊಂದಿಗೆ ಸೇರಿಕೊಳ್ಳುವ ದಿನ ದೂರವಿಲ್ಲ.